ಜೆಡಿಎಸ್ ಬಿಟ್ಟು ಕಾಂಗ್ರೆಸ್, ಬಿಜೆಪಿಗೆ ಹೋಗಿರುವ ಬಹಳಷ್ಟು ನಾಯಕರು ಮನಪರಿವರ್ತನೆಯಾಗಿ ವಾಪಸ್ ಜೆಡಿಎಸ್ಗೆ ಬರಬಹುದು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇದೆ. ಈ ಸಮಯದಲ್ಲಿ ಏನಾದ್ರೂ ರಾಜಕೀಯ ದ್ರುವೀಕರಣ ಆಗಿ ರಮೇಶ ಜಾರಕಿಹೊಳಿ ಅವರು ಜೆಡಿಎಸ್ ಸೇರ್ಪಡೆಯಾಗುತ್ತಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಿಎಂ ಕುಮಾರಸ್ವಾಮಿ ನನ್ನ ಮುಂದೆ ಈಗ ಅದ್ಯಾವುದೂ ಪ್ರಶ್ನೆ ಇಲ್ಲ.
ಈಗ ನನ್ನ ಮುಂದೆ ಇರೋದು ಪಂಚರತ್ನ ರಥಯಾತ್ರೆ ಯಶಸ್ವಿಗೊಳಿಸಬೇಕು. ಈ ರಥಯಾತ್ರೆ ಮುಖಾಂತರ ನಮ್ಮ ಪಕ್ಷದ ನಿಲುವುಗಳು ನಾಡಿನ ಜನರಿಗೆ ತಲುಪಬೇಕು. ನಾವು 123ಕ್ಕೆ ಗುರಿ ಇಟ್ಟುಕೊಂಡು ಹೋಗುತ್ತಿದ್ದೇವೆ. ಈ ಗುರಿ ಮುಟ್ಟಲು ಬಹುಷಃ ಮುಂದಿನ ದಿನಗಳಲ್ಲಿ ಹಲವಾರು ರೀತಿಯ ಪೊಲರೇಸೇಶನ್ ಆಗಬಹುದು. ಆದರೆ ನಮ್ಮ ಮುಂದಿನ ಉತ್ತಮವಾದ ಸರ್ಕಾರ ತರುವ ನಿಟ್ಟಿನಲ್ಲಿ ಸೂಕ್ತ ಸಂದರ್ಭದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.
ಬೇರೆ ಪಕ್ಷದ ನಾಯಕರು ನಿಮ್ಮ ಪಕ್ಷದ ಸಂಪರ್ಕಿಸದಲ್ಲಿದ್ದಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಹಲವಾರು ಜನ ಸ್ನೇಹಿತರು, ಹಿತೈಷಿಗಳು ಇದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ನಡೆಯುತ್ತಿರುವ ಕೆಲ ಬೆಳವಣಿಗೆಗಳನ್ನು ನೋಡಿದಾಗ ಮನಪರಿವರ್ತನೆಯಾಗಿ ಬರಬಹುದು. ಬಂದಾಗ ನೋಡೋಣ, ಆವಾಗ ಏನು ತೀರ್ಮಾನ ತೆಗೆದುಕೊಳ್ಳಬೇಕೋ ತೆಗೆದುಕೊಳ್ಳುತ್ತೇವೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.