ಮಂಡ್ಯ, : “ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿಯವರನ್ನು ಮುಂಬಾಗಿಲಿನಿಂದ ಕಳುಹಿಸಿಬಿಡೋಣ” ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತದಾರಿಗೆ ಕರೆ ನೀಡಿದ್ದಾರೆ.
ಮಂಡ್ಯ ತಾಲ್ಲೂಕಿನ ತಿರುಮಲಾಪುರ ಗ್ರಾಮದಲ್ಲಿ ಶ್ರೀ ಹುಲಿಯೂರಮ್ಮ(ಹಳೇಊರಮ್ಮ) ದೇವಿ ದೇವಾಲಯ ಸೇವಾ ಸಮಿತಿ ಟ್ರಸ್ಟ್ ಸಹಯೋಗದಲ್ಲಿ ಶ್ರೀ ಹುಲಿಯೂರಮ್ಮ ದೇವಿ ವಿಗ್ರಹ ಪ್ರತಿಷ್ಠಾಪನೆ ಮತ್ತು ಉದ್ಘಾಟನಾ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, “ಪರಿಶಿಷ್ಠ ಜಾತಿ, ವರ್ಗ, ಹಿಂದುಳಿದವರ ಕಲ್ಯಾಣಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದೇವೆ.
ಕೃಷಿ ಭಾಗ್ಯವನ್ನು ನಿಲ್ಲಿಸಿದ್ದಾರೆ. ಇವರು ಅಧಿಕಾರಕ್ಕೆ ಬಂದಿರುವುದೇ ಹಿಂಬಾಗಿಲಿನಿಂದ. ಹಿಂಬಾಗಿಲಿಂದ ಬಂದವರನ್ನು ಮುಂಬಾಗಿಲಿಂದಲೇ ಓಡಿಸೋಣ. ಇಂತಹವರು ಮತ್ತೆ ಅಧಿಕಾರಕ್ಕೆ ಬರಬೇಕೇ?” ಎಂದು ಪ್ರಶ್ನಿಸಿದರು.
“ಜನರ ಆಶೀರ್ವಾದದಿಂದ ಮುಖ್ಯಮಂತ್ರಿಯಾಗಿದ್ದೆ, ಆದರೆ, ಯಾರಿಂದಲೂ ಚೀ, ಥೂ ಎಂದು ಅನ್ನಿಸಿಕೊಂಡು ಆಡಳಿತ ನಡೆಸಿಲ್ಲ, 165 ಭರವಸೆಗಳನ್ನು ನೀಡಿದ್ದೆವು, ಇದರಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. 30ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಮಾಡಿದ್ದೇವೆ, ಈ ಸಮಾಜದಲ್ಲಿರುವ ಎಲ್ಲ ಹಿಂದುಳಿದ ಬಡವರಿಗೆ ಅಂದರೆ, ಕೇವಲ ಕುರುಬರಿಗಷ್ಟೇ ಮಾಡಲಿಲ್ಲ, ಮುಸ್ಲಿಂ, ಒಕ್ಕಲಿಗರು, ಬ್ರಾಹ್ಮಣರು, ಕ್ರಿಶ್ಚಿಯನ್ ಸೇರಿದಂತೆ ಎಲ್ಲಾ ಜಾತಿ ಬಡವರಿಗೆ ಏಳು ಕೆ.ಜಿ.ಅಕ್ಕಿಯನ್ನು ಉಚಿತವಾಗಿ ನೀಡಿದೆವು, ಶಾಲಾ ಮಕ್ಕಳಿಗೆ ಉಚಿತವಾಗಿ ಹಲವು ಸೌಲಭ್ಯ, ರೈತರಿಗೆ 50,000 ಸಾಲ ಮನ್ನಾ ಮಾಡಿದೆವು ಇವೆಲ್ಲವನ್ನೂ ಕೇವಲ ಒಂದು ಜಾತಿಗೆ ನೀಡಲಿಲ್ಲ” ಎಂದು ಹೇಳಿದರು.