ಬಾಗಲಕೋಟೆ, ಅಕ್ಟೋಬರ್, 28; ಕಳೆದ ಎರಡು ವರ್ಷಗಳಿಂದ ಜಾತ್ರೆಗಳಿಗೆ ಕೋವಿಡ್ ಕಂಟಕ ಎದುರಾಗಿತ್ತು. ಆದರೆ ಈ ಬಾರಿ ಮುಕ್ತ ಅವಕಾಶ ಸಿಕ್ಕಿದ್ದು, ಜಾತ್ರೆಗಳಿಗೆ ಮತ್ತೆ ಕಳೆ ಬಂದಿದೆ. ಬಾಗಲಕೋಟೆ ಜಿಲ್ಲೆಯ ಕುಳಗೇರಿ ಗ್ರಾಮದಲ್ಲಿ ನಡೆದ ಜಾತ್ರೆ ಎಲ್ಲರ ಗಮನ ಸೆಳೆಯಿತು.
ಇಡೀ ಜಾತ್ರೆ ತುಂಬಾ ಭಂಡಾರದ ಓಕುಳಿ ಆಡಿ ಬೀರಲಿಂಗನ ಭಕ್ತರು ಸಂಭ್ರಮಿಸಿದರು.
ಅದ್ದೂರಿಯಾಗಿ ನೆರವೇರುತ್ತಿರುವ ರಥೋತ್ಸವವನ್ನು ನೋಡುವುದಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ಎಲ್ಲ ಕಡೆ ಭಂಡಾರಮಯ ಹೊಂಬಣ್ಣದ ಓಕುಳಿ ಕಳೆಗಟ್ಟಿತ್ತು. ಬಾಗಲಕೋಟೆ ಜಿಲ್ಲೆಯ ಕುಳಗೇರಿ ಗ್ರಾಮದ ಜನರು ಹೀಗೆ ಓಕುಳಿಯಾಡಿ ಸಂಭ್ರಮಿಸಿದರು. ಕಳೆದ ಎರಡು ವರ್ಷ ಕೋವಿಡ್ನಿಂದ ಜಾತ್ರೆಗಳಿಗೆ ಗ್ರಹಣ ಬಡಿದಂತಾಗಿತ್ತು. ಕೋವಿಡ್ ಹಿನ್ನೆಲೆ ಬಂದ್ ಆಗಿದ್ದ ಜಾತ್ರೆಗೆ ಇದೀಗ ಮತ್ತೆ ಕಳೆಬಂದಂತಾಗಿದೆ.
ಎಲ್ಲ ಕಡೆ ಐತಿಹಾಸಿಕ, ಸಾಂಪ್ರದಾಯಿಕ ಜಾತ್ರೆಗಳು ಅದ್ದೂರಿಯಾಗಿ ನಡೆಯುತ್ತಿವೆ. ಇದಕ್ಕೆ ಕುಳಗೇರಿ ಗ್ರಾಮದಲ್ಲಿ ನಡೆದ ಬೀರಲಿಂಗೇಶ್ವರ ಜಾತ್ರೆಯ ಸಂಭ್ರಮವೇ ಸಾಕ್ಷಿ ಆಗಿದೆ. ಕಳೆದ 6 ದಶಕಗಳಿಂದ ಈ ಗ್ರಾಮದಲ್ಲಿ ಬೀರಲಿಂಗೇಶ್ವರ ಜಾತ್ರೆ ನಡೆಯುತ್ತಿದ್ದು, ಇಂದು ಸಂಭ್ರಮದಿಂದ ರಥೋತ್ಸವ ನೆರವೇರಿತು. ಜಾತ್ರೆ ರಥೋತ್ಸವ ಭಂಡಾರದ ಓಕುಳಿಯಲ್ಲಿ ಬಾಗಲಕೋಟೆ ಸೇರಿದಂತೆ ಅಕ್ಕಪಕ್ಕ ಜಿಲ್ಲೆಗಳ ಸಹಸ್ರಾರು ಜನರು ಭಾಗಿಯಾಗಿ ಸಂಭ್ರಮಿಸಿದರು.
ಓಕುಳಿ ನೋಡಲು ನೆರೆದಿದ್ದ ಜನಸಾಗರ; ಕುಳಗೇರಿ ಬೀರಲಿಂಗೇಶ್ವರ ಜಾತ್ರೆ ಆರು ದಶಕಗಳಿಂದಲೂ ನಡೆಯುತ್ತಿದ್ದು, ತನ್ನದೇ ಆದ ಮಹತ್ವ ಕಾಪಾಡಿಕೊಂಡು ಬಂದಿದೆ. ಓಕುಳಿಯನ್ನು ನೋಡಲು ಇಂದಿಗೂ ಭಕ್ತರು ಸಾಗರೋಪಾದಿಯಲ್ಲಿ ಹರಿದು ಬರುತ್ತಲೇ ಇದ್ದಾರೆ. ಜಾತ್ರೆಯಲ್ಲಿ ಡೊಳ್ಳು ಕುಣಿತ, ಪಲ್ಲಕ್ಕಿ ಮೆರವಣಿಗೆ ಜನರನ್ನು ತನ್ನತ್ತ ಸೆಳೆಯುವಂತಿತ್ತು. ಇಲ್ಲಿ ಸುಮ್ಮನೆ ಭಂಡಾರದ ಓಕುಳಿಯನ್ನು ಆಡುವುದಿಲ್ಲ. ಭಕ್ತರು ತಮ್ಮ ಇಷ್ಟಾರ್ಥ ಈಡೇರಿಸುವಂತೆ ಬೀರಲಿಂಗೇಶ್ವರನಲ್ಲಿ ಬೇಡಿಕೊಂಡಿರುತ್ತಾರೆ. ಬೇಡಿಕೆ ಈಡೇರಿದರೆ ಇಂತಿಷ್ಟು ಕೆ.ಜಿ, ಕ್ವಿಂಟಲ್ ಲೆಕ್ಕದಲ್ಲಿ ಭಂಡಾರವನ್ನು ಅರ್ಪಿಸುತ್ತೇವೆ ಎಂದು ಹರಕೆ ಹೊತ್ತಿರುತ್ತಾರೆ. ತಮ್ಮ ಬೇಡಿಕೆ ಈಡೇರಿದಾಗ ಭಂಡಾರ ಅರ್ಪಿಸುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅದೇ ಭಂಡಾರದಲ್ಲಿ ಭಕ್ತರು ಓಕುಳಿ ಆಡಿ ಸಂಭ್ರಮಿಸ್ತಾರೆ.