ಚಿಕ್ಕೋಡಿ : ಕಳೆದ ಒಂದೂವರೆ ವರ್ಷದ ಹಿಂದೆ ನಡೆದಿದ್ದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಪರಾಭವಗೊಂಡು ಮರು ಮತ ಎಣಿಕೆಗೆ ಕೋರ್ಟ್ ಮೆಟ್ಟಿಲೇರಿದ್ದ ಅಭ್ಯರ್ಥಿಗೆ ಮುಖಭಂಗವಾದ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮ ಪಂಚಾಯತಿಯ 2020 ರ ಡಿಸೆಂಬರ್ 30 ರಂದು ನಡೆದಿದ್ದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಮತ ಎಣಿಕೆ ಸರಿಯಾಗಿಲ್ಲ ಎಂದು ಆರೋಪಿಸಿ ಪರಾಜಿತ ಅಭ್ಯರ್ಥಿಯಾದ ರಾವಸಾಹೇಬ್ ಪಾಟೀಲ್ , ಸಂಕೇಶ್ವರದ ಜೆ.ಎಂ.ಎಫ್.ಸಿ ಕೋರ್ಟ್ ಮೊರೆ ಹೋಗಿದ್ದರು.
ಆದರೆ ಅವರು ನ್ಯಾಯಾಲಯದಲ್ಲಿ ಮತ್ತೊಮ್ಮೆ ನಡೆದ ಮರು ಮತ ಎಣಿಕೆಯಲ್ಲೂ ಸೋಲು ಕಂಡಿದ್ದು, ಇದೀಗ ಎರಡೆರಡು ಬಾರಿ ಸೋತಂತಾಗಿದ್ದು ರಾವಸಾಹೇಬ್ಗೆ ಮುಖಭಂಗವಾಗಿದೆ.
ರಾವ್ಸಾಹೇಬ್ ಪಾಟೀಲ್ ಕೋರ್ಟಿನಲ್ಲಿ ಮರು ಎಣಿಕೆ ಪ್ರಕ್ರಿಯೆಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿ, ‘ಮೊದಲು ನಾನು ಮರು ಎಣಿಕೆ ಮಾಡುವಂತೆ ಲಿಖಿತ ರೂಪದ ದೂರು ನೀಡಿದ್ದೆ. ಆದರೆ ಅದು ಪ್ರಯೋಜನಕ್ಕೂ ಬರಲಿಲ್ಲ. ಆಗ ಅಲ್ಲಿದ್ದ ಕೆಲವು ಅಧಿಕಾರಿಗಳು ನನಗೆ ಕೋರ್ಟಿಗೆ ಹೋಗುವಂತೆ ಸಲಹೆ ನೀಡಿದರು. ಅದರಂತೆ ನಾನು ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದೇನೆ. ನನಗೆ ಕೋರ್ಟಿನಲ್ಲಿ ಜಯ ಸಿಗುವುದಾಗಿ ಭರವಸೆ ಇದೆ’ ಎಂದಿದ್ದರು.
ಗ್ರಾಮಪಂಚಾಯಿತಿ ಚುನಾವಣೆಯಲ್ಲಿ 505 ಮತ ಪಡೆದು ರಾವಸಾಹೇಬ್ ಪಾಟೀಲ್ ಪರಾಭವಗೊಂಡಿದ್ದರು. ಆದರೆ 506 ಮತಗಳನ್ನು ಪಡೆಯುವ ಮೂಲಕ ರಾವಸಾಹೇಬ್ ವಿರುದ್ಧ ತವನಪ್ಪ ಹೊಸೂರ ಎಂಬ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಇಂದು ಸಂಕೇಶ್ವರದ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಜಡ್ಜ್ ಸಮ್ಮುಖದಲ್ಲಿ ಹಾಗೂ ಹುಕ್ಕೇರಿ ತಹಶೀಲ್ದಾರ ಡಾ.ದೊಡ್ಡಪ್ಪ ಹೂಗಾರ ಸಮ್ಮುಖದಲ್ಲಿ ಮರು ಮತ ಎಣಿಕೆ ಪ್ರಕ್ರಿಯೆ ನಡೆಯಿತು. ಮರು ಮತ ಎಣಿಕೆಯಲ್ಲೂ ಸಹ ತವನಪ್ಪ ಹೊಸುರ ಜಯಶಾಲಿಯಾಗಿದ್ದಾರೆ.