ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ಶಿಂಧೆ ತೋಟದ ರಸ್ತೆಗಳು ಹದಗೆಟ್ಟು ಹೋಗಿವೆ.ರಸ್ತೆಗಳು ಹದಗೆಟ್ಟ ಪರಿಣಾಮ ಗ್ರಾಮದ ಶಿಂಧೆ ತೋಟದ ಸುಮಾರು 30 ಮನೆಗಳು ಸಂಪರ್ಕ ಕಡಿತವಾಗಿವೆ.
ಮಳೆಗಾಲ ಪ್ರಾರಂಭವಾದರೆ ಸಾಕು ಶಿಂಧೆ ತೋಟದ ಜನರ ಪರಿಸ್ಥಿತಿ ಹೇಳತೀರದಾಗಿದೆ. 2 ಅಡಿಯಷ್ಟು ದೊಡ್ದ ದೊಡ್ಡ ಗುಂಡಿಗಳು,ಆ ಗುಂಡಿಗಳಲ್ಲಿ ನೀರು ಸಂಗ್ರಹ. ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಹೋಗುವ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಇದರಿಂದಾಗಿ ದಿನಪ್ರತಿ ವಿದ್ಯಾರ್ಥಿಗಳು ಶಾಲೆಗೆ ಹೋಗುವಾಗ ಜಾರಿ ಬೀಳುವುದು ಸಹಜವಾಗಿದೆ. ಮಹಿಳೆಯರು, ವೃಧ್ಧರು ರಸ್ತೆ ಮೇಲೆ ಸಂಚರಿಸಲು ಪರದಾಡುವ ದುಸ್ಥಿತಿ ನಿರ್ಮಾಣವಾಗಿದೆ.
ಈ ಹದಗೆಟ್ಟ ರಸ್ತೆಯಿಂದಾಗಿ ಶಿಂಧೆ ತೋಟದ ಮನೆಗಳಿಗೆ ಬೇರೆ ಊರುಗಳಿಂದ ಬರುವ ಸಂಬಂಧಿಕರು, ಅತಿಥಿಗಳು ಈ ರಸ್ತೆಯಲ್ಲಿನ ಗುಂಡಿಗಳನ್ನು ನೋಡಿ ಮತ್ತೆ ವಾಪಸ್ಸ ಹೋಗುತ್ತಿದ್ದಾರೆ ಎಂದು ಶಿಂಧೆ ತೋಟದ ಜನರು ಅಳಲುತೋಡಿಕೊಳ್ಳುತ್ತಿದ್ದಾರೆ. ಶಾಸಕ ದುರ್ಯೋಧನ ಐಹೊಳೆಯವರು ಈ ರಸ್ತೆ ಬಗ್ಗೆ ಗಮನಹರಿಸಿ ರಸ್ತೆ ನಿರ್ಮಾಣ ಮಾಡಿಕೊಡಿ ಎಂದು ಶಿಂಧೆ ತೋಟದ ಜನರು ಒತ್ತಾಯಿಸಿದ್ದಾರೆ.