Breaking News
Home / ರಾಜಕೀಯ / ಇಂದು ಗಾಂಧಿ ಜಯಂತಿ; ಸೇವಾಕಾರ್ಯಕ್ಕೆ ಗಾಂಧೀಜಿ ಪ್ರೇರಣೆ

ಇಂದು ಗಾಂಧಿ ಜಯಂತಿ; ಸೇವಾಕಾರ್ಯಕ್ಕೆ ಗಾಂಧೀಜಿ ಪ್ರೇರಣೆ

Spread the love

ಬೆಳಗೆರೆ ಕೃಷ್ಣಶಾಸ್ತ್ರಿಗಳು ಮೊದಲಿನಿಂದ ಗಾಂಧೀಜಿಯವರ ವ್ಯಕ್ತಿತ್ವದಿಂದ ಪ್ರಭಾವಿತರಾಗಿದ್ದರು. 1936ರಲ್ಲಿ ಗಾಂಧೀಜಿ ಕರ್ನಾಟಕಕ್ಕೆ ಭೇಟಿ ಕೊಟ್ಟಾಗ ಬೆಳಗೆರೆ ಕೃಷ್ಣಶಾಸ್ತ್ರಿಗಳು ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸಿದರು.

ಮೋಹನದಾಸ ಕರಮಚಂದ್‌ ಗಾಂಧಿ, ಜನಸಾ ಮಾನ್ಯರ “ಬಾಪು’ (ತಂದೆ), ಮಹಾತ್ಮಾ, ಹುಟ್ಟಿ ಇಂದಿಗೆ 153 ವರ್ಷಗಳಾಗಿವೆ.

“ಮೋಹನ’ ಎಂದರೆ ಮನಸ್ಸನ್ನು ಆಕರ್ಷಿಸುವುದು ಎಂದರ್ಥ. ನಿಜವಾಗಿ, ಮೋಹನ ದಾಸ ಕರಮಚಂದ್‌ ಗಾಂಧಿಯವರ ಆಕರ್ಷಣೆಗೆ ಒಳಗಾಗದವರೇ ಇಲ್ಲ. “ಗಾಂಧಿ ಒಬ್ಬ ವ್ಯಕ್ತಿ ಅಲ್ಲ, ಒಂದು ಪಂಥ ಎನ್ನುವುದು ಅಂದಿನ ದಿನಗಳಲ್ಲಿ ಕೇಳಿ ಬರುತ್ತಿದ್ದ ಸಾಮಾನ್ಯ ಉಕ್ತಿ.

ದೇಶ-ವಿದೇಶಗಳಲ್ಲಿ ಪಂಡಿತರು, ಪಾಮರರು ಗಾಂಧೀಜಿಯವರ ಆದರ್ಶಗಳಿಗೆ, ವ್ಯಕ್ತಿತ್ವಕ್ಕೆ , ಮಾಂತ್ರಿ ಕತೆಗೆ ಮಾರುಹೋದರು. ನಮ್ಮ ಕರುನಾಡಿನಲ್ಲಿ ಕೂಡ ಡಾ| ಶಿವರಾಮ ಕಾರಂತರು, ಗೊರೂರು ರಾಮಸ್ವಾಮಿ ಅಯ್ಯಂಗಾರ್‌, ದ.ರಾ.ಬೇಂದ್ರೆ,ತಗಡೂರು ರಾಮಚಂದ್ರರಾವ್‌, ಡಾ| ಎಚ್‌. ನರ ಸಿಂಹ ಯ್ಯ. ಮುಂತಾದ ಹಲವಾರು ಗಾಂಧೀಜಿ ಯವರ ಕರೆಗೆ ಓಗೊಟ್ಟು ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದವರೇ!

ಮುಂದಿನ ದಿನಗಳಲ್ಲಿ ಅನೇಕರು ಗಾಂಧೀಜಿಯವರನ್ನು ಕುರಿತು ಬರೆದರು. ಡಿವಿಜಿಯವರು “ದೈವ ಸಂಪನ್ಮಾರ್ಗದರ್ಶಕ’ ಎಂದು ವರ್ಣಿಸಿದರೆ, ಚೆನ್ನವೀರ ಕಣವಿಯವರು, “ಹಿಂಸೆಯನ್ನು ತಳ್ಳಿನಿಂತು ಗಾಂಧೀ ರೂಪ ಅಪರೂಪ ದೀಪ ಭಾರತವ ಬೆಳಗಿ ನಿಂತಿತು’ ಎನ್ನುತ್ತಾರೆ. ಕೈಲಾಸಂ ಅವರು, “ಹಿಮಗಿರಿಯ ಮೀರಿ ನಿಮಿರ್ದ ಹಿರಿಯಾತ್ಮ’ ಎಂದು ಕರೆಯು ತ್ತಾರೆ. ವರಕವಿ ದ.ರಾ.ಬೇಂದ್ರೆಯವರಂತೂ, “ಮೋಹನ ದಾಸನ ಉಸಿರಿಗೆ ಬೀಸಿದ ಬಿರು ಗಾಳಿಯಾಗ ಸುಟ್ಟುರೆ ಕಂಡವು ನೆಲದೊಳು ಅವಿತಿದ್ದ ಸೊಪ್ಪು ಸವದಿಗಳೆಲ್ಲ ಮೋಡಗಳಾಡುವ ಎಡೆ ಕಂಡವು’ ಎಂದು, ಗಾಂಧೀಜಿಯವರನ್ನು ಸುಂಟರಗಾಳಿಗೆ ಹೋಲಿಸಿ, ಇಡೀ ದೇಶದ ಜನಮಾನಸದಲ್ಲಿ ಅವರು ಆವರಿಸಿದ ರೀತಿಯನ್ನು ಮನಮೋಹಕವಾಗಿ ಚಿತ್ರಿಸಿದ್ದಾರೆ.

ಖ್ಯಾತ ಲೇಖಕರು, ಶಿಕ್ಷಕರು, ಶಿಕ್ಷಣ ತಜ್ಞರು, ಸಮಾಜ ಸುಧಾರಕರಾದ ಬೆಳಗೆರೆ ಕೃಷ್ಣಶಾಸ್ತ್ರಿಗಳು ಗಾಂಧೀಜಿಯವರನ್ನು ಹತ್ತಿರದಿಂದ ಕಂಡವರು. ಅವರು, ತಮ್ಮ ಪುಸ್ತಕದಲ್ಲಿ ವಿವರಿಸಿರುವ ಕೆಲವು ರೋಚಕ ಅನುಭವಗಳನ್ನು ತಿಳಿಯೋಣ.

ಬೆಳಗೆರೆ ಕೃಷ್ಣಶಾಸ್ತ್ರಿಗಳು ಮೊದಲಿನಿಂದ ಗಾಂಧೀಜಿಯವರ ವ್ಯಕ್ತಿತ್ವದಿಂದ ಪ್ರಭಾವಿತರಾಗಿದ್ದರು.. 1936ರಲ್ಲಿ ಗಾಂಧೀಜಿ ಕರ್ನಾಟಕಕ್ಕೆ ಭೇಟಿ ಕೊಟ್ಟಾಗ ಬೆಳಗೆರೆ ಕೃಷ್ಣಶಾಸ್ತ್ರಿಗಳು ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸಿದರು. ಗಾಂಧೀಜಿಯವರ ಸರಳ -ಸಹಜ- ಸಾರ್ಥಕ ನಡವಳಿಕೆಯನ್ನು ಹತ್ತಿರದಿಂದ ಕಂಡ ಶಾಸ್ತ್ರಿಗಳಿಗೆ ಅವರ ಮೇಲಿನ ಗೌರವ ಇಮ್ಮಡಿ ಯಾಯಿತು. ಅಷ್ಟೇ ಅಲ್ಲ, ಈ ಅವಧಿಯಲ್ಲಿ ನಡೆದ ಹಲವಾರು ಘಟನೆಗಳು ಶಾಸಿŒಗಳ ಮೇಲೆ ಗಾಢವಾದ ಪರಿಣಾಮವನ್ನು ಬೀರಿ, ಅವರ ಮುಂದಿನ ಜೀವನವನ್ನು ರೂಪಿಸಿದವು.

ಗಾಂಧೀಜಿಯವರು ಕರ್ನಾಟಕದಲ್ಲಿದ್ದಾಗ ಒಮ್ಮೆ ಇಬ್ಬರು ವ್ಯಕ್ತಿಗಳು ಅವರ ಭೇಟಿಗೆ ಬಂದರು. ಅಕ್ಕಪಕ್ಕದ ಸ್ವಯಂ ಸೇವಕರಿಂದ, ಬಂದಿದ್ದವರು ಪ್ರಸಿದ್ಧ ವಕೀಲರಾದ ಕಲ್ಲೂರು ಸುಬ್ಬರಾಯರು ಮತ್ತು ಹಿಂದೂಪುರದ ಕಂಬಳಿ ಕಾರ್ಖಾನೆಯ ಮಾಲಕ ರಾದ ಲಿಂಗಣ್ಣನವರೆಂದು ಕೃಷ್ಣಶಾಸ್ತ್ರಿಗಳಿಗೆ ತಿಳಿಯಿತು. ಲಿಂಗಣ್ಣನವರ ಕೈಮಗ್ಗಗಳಿಂದ, ಯಂತ್ರಗಳಿಂದ ಹಿಂದೂ ಪುರದ ಕಾರ್ಖಾನೆಯಲ್ಲಿ ತಯಾರಾಗುತ್ತಿದ್ದ ಕಂಬಳಿಗಳು ಮದರಾಸು, ಮುಂಬಯಿಗಷ್ಟೇ ಅಲ್ಲದೇ ಸಿಂಗಾಪುರ, ಸಿಲೋನ್‌(ಶ್ರೀಲಂಕಾ), ಮುಂತಾದ ದೇಶಗಳಲ್ಲೂ ಪ್ರಸಿದ್ಧವಾಗಿದ್ದವು. ಕಲ್ಲೂರು ಸುಬ್ಬರಾಯರು ಗಾಂಧೀಜಿಯವರ ಕಾನೂನು ಸಲಹೆಗಾರರಾಗಿದ್ದರು, ಹಲವಾರು ಬಾರಿ ಗಾಂಧೀಜಿಯವರನ್ನು ಭೇಟಿ ಮಾಡಿದ್ದರು. ಆದರೆ ಲಿಂಗಣ್ಣನವರಿಗೆ ಇದು ಮೊದಲ ಭೇಟಿ. ಸುಬ್ಬರಾಯರು ಗಾಂಧೀಜಿಗೆ ಲಿಂಗಣ್ಣನವರ ಪರಿಚಯ ಮಾಡಿಕೊಟ್ಟರು. ಗ್ರಾಮ ಕೈಗಾರಿಕೆಗಳಿಗೆ ಒತ್ತುಕೊಟ್ಟು ಅನೇಕರಿಗೆ ಉದ್ಯೋಗ ಅವಕಾಶ ಕಲ್ಪಿಸಿದ ಲಿಂಗಣ್ಣನವರ ಬಗ್ಗೆ ಗಾಂಧೀಜಿ ಮೆಚ್ಚುಗೆ ಸೂಚಿಸಿದರು.

ಲಿಂಗಣ್ಣನವರು ಹೆಚ್ಚು ಓದಿದವರಲ್ಲ, ಇಂಗ್ಲಿಷ್‌, ಹಿಂದಿ ಅವರಿಗೆ ಬರುತ್ತಿರಲಿಲ್ಲ. ಹಾಗಾಗಿ ಗಾಂಧೀಜಿಯವರ ಮಾತನ್ನು ಸುಬ್ಬರಾಯರೇ ಅವರಿಗೆ ವಿವರಿಸುತ್ತಿದ್ದರು. ಸುಬ್ಬರಾಯರು ಮತ್ತಷ್ಟು ವಿವರಗಳನ್ನು ಹೇಳುತ್ತಾ ಹೋದಂತೆ ಗಾಂಧೀಜಿಯವರು, “”ಹಮ್‌ ಕೊ ಕ್ಯಾ ದೇತೇ ಹೈ?” (ಇವರು ನಮಗೆ ಏನು ಕೊಡುತ್ತಾರೆ?) ಎಂದರು. ಸುಬ್ಬರಾಯರಿಂದ ಈ ಮಾತಿನ ಅರ್ಥ ತಿಳಿದ ಲಿಂಗಣ್ಣನವರು, “ಎಲ್ಲವೂ ಅವರದೇ, ನಾನು ಕೊಡುವುದೇನಿದೇ?’ ಎಂದರು.

ಸುಬ್ಬರಾಯರು ಇದನ್ನು ಗಾಂಧೀಜಿಗೆ ತಿಳಿಸಿದಾಗ ಅವರು ನಕ್ಕು, “ಅಚ್ಚೀ ಬಾತ್‌ ಹೈ’ (ಒಳ್ಳೆಯದು) ಎಂದರು. ಅಷ್ಟರಲ್ಲಿ ಅವರಿಬ್ಬರಿಗೆ ಕೊಟ್ಟಿದ್ದ ಅವಧಿ ಮುಗಿಯಿತು.. ಸಮಯಕ್ಕೆ ಬಹಳ ಬೆಲೆ ಕೊಡುತ್ತಿದ್ದ ಗಾಂಧೀಜಿ ತಮ್ಮ ಪಾಡಿಗೆ ತಾವು ರಾಟೆ ತೆಗೆದುಕೊಂಡು ನೂಲು ತೆಗೆಯುತ್ತ ಕುಳಿತರು.

ಅಲ್ಲಿಂದ ಹೊರಬಂದ ಲಿಂಗಣ್ಣನವರು ಸುಮ್ಮನಿರಲಿಲ್ಲ. ಕಾರ್ಯ ಪ್ರವೃತ್ತರಾದರು. ಕೆಲವೇ ದಿನಗಳಲ್ಲಿ ಸುಬ್ಬರಾಯರು ಮತ್ತು ಲಿಂಗಣ್ಣನವರು ಮತ್ತೆ ಗಾಂಧೀಜಿಯವರನ್ನು ನೋಡಲು ಬಂದರು. ಲಿಂಗಣ್ಣ ನವರು ಗಾಂಧೀಜಿಯವರಿಗೆ ನಮಸ್ಕರಿಸಿ ತಮ್ಮ ಕೈಯಲ್ಲಿದ್ದ ಕಾಗದ ಪತ್ರಗಳನ್ನು ಅವರ ಕೈಗಿತ್ತರು. ಸುಬ್ಬರಾಯರು ಗಾಂಧೀಜಿಯವರಿಗೆ ವಿವರಿಸಿದರು.

ಲಿಂಗಣ್ಣನವರು ತಮ್ಮ ಹೆಂಡತಿಯ ಜೀವನಾಂಶಕ್ಕೆ 10 ಸಾವಿರ ರೂಪಾಯಿಗಳನ್ನು ಬ್ಯಾಂಕ್‌ನಲ್ಲಿ ಡಿಪಾಸಿಟ್‌ ಮಾಡಿ, ಉಳಿದ ಎಲ್ಲವನ್ನೂ, ಅಂದರೆ ಉಳಿದ ಹಣ, ಕಾರ್ಖಾನೆ, ಜಮೀನು, ಮನೆ ಎಲ್ಲವನ್ನೂ ಗಾಂಧೀ  ಜಿಯವರ ಹೆಸರಿಗೆ ಬರೆದಿದ್ದರು. ವಿಷಯ ತಿಳಿದ ಗಾಂಧೀಜಿ ಬಹಳ ಆಶ್ಚರ್ಯಪಟ್ಟರು. ಸಾವ ಧಾನ ವಾಗಿ ಕಾಗದ ಪತ್ರಗಳನ್ನು ಪರಿಶೀಲಿಸಿದರು. ಅನಂತರ ಏನು ಮಾಡಿದರು ಗೊತ್ತೇ? ಎಲ್ಲವನ್ನೂ ಲಿಂಗಣ್ಣವರಿಗೆ ಹಿಂದಿರುಗಿಸಿ, ಇದನ್ನು “”ಒಂದು ಸೇವಾ ಶ್ರಮ ಸ್ಥಾಪಿಸಲು ಬಳಸಿಕೊಳ್ಳಿ. ನೀವೂ ಇದರಲ್ಲಿ ತೊಡಗಿಕೊಳ್ಳಿ” ಎಂದರು.

ಗಾಂಧೀಜಿಯವರ ಸೂಚನೆಯಂತೆ ಲಿಂಗಣ್ಣ ನವರು ಪೆನ್ನಾರ್‌ ನದಿಯ ದಂಡೆಯಲ್ಲಿ ಸೇವಾಶ್ರಮ ಸ್ಥಾಪಿಸಿದರು. ಕಾರ್ಖಾನೆಯ ಆದಾಯವೆಲ್ಲ ಸೇವಾ ಶ್ರಮಕ್ಕೆ ಸಂದಾಯವಾಗುವಂತೆ ವ್ಯವಸ್ಥೆ ಮಾಡಿದರು. ಸೇವಾಶ್ರಮದ ಆಶ್ರಯದಲ್ಲಿ ಶಾಲೆಯನ್ನು, ಹಾಸ್ಟೆಲ್‌ ಅನ್ನು ಪ್ರಾರಂಭಿಸಿದರು. ಅಲ್ಲಿಯೇ ತಿಂಗಳಿಗೆ ಮೂವತ್ತು ರೂಪಾಯಿಗಳ ಸಂಬಳಕ್ಕಾಗಿ ಸೇರಿದರು. ಬದುಕಿರುವಷ್ಟು ದಿನ ಹೀಗೇ ದುಡಿದರು, ನಿಗದಿಯಾದ ಸಂಬಳಕ್ಕಿಂತ ಒಂದು ಕಾಸನ್ನೂ ಹೆಚ್ಚಿಗೆ ತೆಗೆದುಕೊಳ್ಳಲಿಲ್ಲ. ಅಷ್ಟೇ ಅಲ್ಲ ಹಾಸ್ಟೆಲ್‌ನಲ್ಲೇ ಊಟ ಮಾಡುತ್ತಿ ದ್ದರು, ಅದರ ವೆಚ್ಚವನ್ನು ಕಳೆದು ಉಳಿದ ಸಂಬಳವನ್ನು ತೆಗೆದುಕೊಳ್ಳುತ್ತಿದ್ದರು.

ಸೇವಾಶ್ರಮ ಪ್ರಾರಂಭೋತ್ಸವಕ್ಕೆ ಸರ್ದಾರ್‌ ಪಟೇಲ್‌, ರಾಜಾಜಿ ಮೊದಲಾದವರು ಬಂದಿದ್ದರು. ಅನಂತರದ ದಿನಗಳಲ್ಲಿ ಈ ಸೇವಾಕೇಂದ್ರ ಕೇವಲ ವಿದ್ಯಾಕೇಂದ್ರವಾಗಿರದೇ ಸ್ವಾತಂತ್ರ್ಯ ಹೋರಾಟದಲ್ಲಿದ್ದ ಭೂಗತ ಚಳವಳಿಗಾರರ ಕೇಂದ್ರವೂ ಆಯಿತು.

ಇದು ಒಂದು ಸಣ್ಣ ತುಣುಕಷ್ಟೇ. ಇಂತಹ ಸಾವಿರಾರು ಪ್ರಸಂಗಗಳು ನಮಗೆ ಕಾಣಸಿಗುತ್ತವೆ. ಗಾಂಧೀಜಿಯವರ ಮಾತಿಗೆ ಓಗೊಟ್ಟು ತಮ್ಮ ದೆಲ್ಲವನ್ನೂ ಸಮರ್ಪಿಸಿದ ಲಿಂಗಣ್ಣನವರ ವರ್ತನೆ ಇಂದಿನ ಜನಾಂಗಕ್ಕೆ ಆಶ್ಚರ್ಯಕರವಾಗಿ ಕಾಣಿಸುವುದು ಸಹಜ. ಇದು ನಿಜವೇ? ಎಂಬ ಪ್ರಶ್ನೆ ಕೂಡ ಉದ್ಭವಿಸಬಲ್ಲದು. ಇನ್ನೂ ಕೆಲವರು, “ಇಂದಿನ ಕಾಲಕ್ಕೆ ಇದೆಲ್ಲ ಸಾಧ್ಯವಿಲ್ಲ ಎನ್ನುತ್ತಾರೆ. ಈ ಘಟನೆಗಳನ್ನು ತಳ್ಳಿಹಾಕುವ ಸಾಧ್ಯತೆಯೂ ಇದೆ.

ಹಾಗಾದರೆ ಇಂತಹ ಘಟನೆಗಳಿಂದ ನಾವು ಕಲಿಯುವುದು ಏನೂ ಇಲ್ಲವೇ? ನಾವು ಇದರಿಂದ ಕಲಿಯಬೇಕಾದ ಬಹುದೊಡ್ಡ ಪಾಠವಿದೆ.ಈ ಸಾಲಿನ ಗಾಂಧಿ ಜಯಂತಿ ಎಲ್ಲರಿಗೂ ಇಂಥ ಜನ ಜಾಗೃತಿ ಮತ್ತು ಜನ ಸಹಾಯ ಕಾರ್ಯಗಳನ್ನು ಮಾಡು ವಂತೆ ಪ್ರಚೋ ದಿಸಲಿ.

ನಿಮಗಿರುವ ವಿವೇಕ ನನಗೂ ಇರಲಿಲ್ಲ ಅಂದರು ಗಾಂಧೀಜಿ!
ಗಾಂಧೀಜಿಯವರು ಹರಿಜನ ಸೇವಾ ಆಂದೋಲನ ಆರಂಭಿಸಿದ್ದ ದಿನಗಳಲ್ಲಿ ನಡೆದ ಪ್ರಸಂಗ ಇದು. ಒಂದು ದಿನ ಮಹಿಳೆಯೊಬ್ಬಳು ತನ್ನ ಒಡವೆಗಳನ್ನು ದಾನ ಮಾಡುವ, ಆ ಮೂಲಕ ಹರಿಜನ ಸೇವಾ ಚಳವಳಿಗೆ ತನ್ನ ಕಿರುಕಾಣಿಕೆ ಸಲ್ಲಿಸುವ ಉದ್ದೇಶದಿಂದ ಗಾಂಧೀಜಿಯವರನ್ನು ತನ್ನ ಮನೆಗೆ ಕರೆದುಕೊಂಡು ಹೋದಳು. ವಿಷಯ ತಿಳಿದ ಪಕ್ಕದ ಮನೆಯ ಹೆಂಗಸು, ತಾನೂ ಬಂದದ್ದಲ್ಲದೆ, ತನ್ನಲ್ಲಿದ್ದ ಅಷ್ಟೂ ಚಿನ್ನದ ಒಡವೆಗಳನ್ನು ಗಾಂಧೀಜಿಯವರಿಗೆ ಕೊಟ್ಟುಬಿಟ್ಟಳು. ಅನಂತರ ಆ ಮಹಿಳೆಯ ಪತಿಯೂ ಅಲ್ಲಿಗೆ ಬಂದ. ಕೈ ಮುಗಿದ.

ಗಾಂಧೀಜಿಯವರಿಗೆ ಪರಿಚಯ ಹೇಳಿಕೊಂಡ.
ಗಾಂಧೀಜಿ ಕೇಳಿದರು: ನಿಮ್ಮ ಹೆಂಡತಿ ತನ್ನೆಲ್ಲ ಚಿನ್ನದ ಒಡವೆಗಳನ್ನೂ ನನಗೆ ದಾನವಾಗಿ ಕೊಟ್ಟಿದ್ದಾರೆ. ಈ ಸಂಗತಿ ನಿಮಗೆ ಗೊತ್ತಿದೆ ತಾನೆ? ಹೀಗೆ ಒಡವೆಗಳನ್ನು ಬಿಚ್ಚಿಕೊಡಲು ನೀವು ಆಕೆಗೆ ಅನುಮತಿ ನೀಡಿದ್ದೀರಾ?’
ಆ ಪತಿರಾಯ ಹೀಗೆಂದ: ಹೌದು, ಆಕೆ ನನಗೆ ಮೊದಲೇ ವಿಷಯ ತಿಳಿಸಿದಳು. ಒಡವೆಗಳನ್ನು ದಾನ ಮಾಡಲು ನನ್ನ ಅನುಮತಿಯನ್ನೂ ಬೇಡಿದಳು. ಆದರೆ ಒಡವೆಗಳು ಆಕೆಯವು. ಆಕೆ ಅವುಗಳನ್ನು ಯಾರಿಗೆ ಬೇಕಾದರೂ ಕೊಡಲಿ. ಅದನ್ನು ತಡೆಯಲು ನನಗೆ ಅಧಿಕಾರವಿಲ್ಲ ಅಂದ್ಕೋತೀನಿ’ ಈ ಮಾತು ಕೇಳಿ-ಎಲ್ಲ ಗಂಡಂದಿರೂ ನಿಮ್ಮಷ್ಟು ವಿವೇಕಿಗಳಾಗಿರೊಲ್ಲ’ ಎಂದು ಉದ್ಗರಿಸಿದ ಗಾಂಧೀಜಿ ಅವರು ಮುಂದುವರಿದು- ಈಗ ನಿಮ್ಮ ವಯಸ್ಸೆಷ್ಟು?’ ಅಂದರು. ಆ ಪತಿರಾಯ ಸ್ವಲ್ಪ ಸಂಕೋಚದಿಂದ ನನಗೀಗ 30 ವರ್ಷ’ ಅಂದ. ತತ್‌ಕ್ಷಣವೇ ಗಾಂಧೀಜಿ- ಆ ವಯಸ್ಸಿನಲ್ಲಿ ನಿಮಗಿರುವ ವಿವೇಕ ನನಗೂ ಇರಲಿಲ್ಲ’ ಎಂದು ಮತ್ತೂಮ್ಮೆ ಉದ್ಗರಿಸಿದರು.

-ಸೌಮ್ಯ ಮಿತ್ರ, ಅಚಲಭಾರತಿ ಸ್ವಯಂ ಸೇವಾ ಸಂಸ್ಥೆ


Spread the love

About Laxminews 24x7

Check Also

ಚುನಾವಣೆ ಪ್ರಚಾರದ ವೇಳೆ ಮೋದಿ ಭಾವಚಿತ್ರ ಬಳಕೆ: ವಿಚಾರಣೆ ಏ.20ಕ್ಕೆ ಮುಂದೂಡಿಕೆ

Spread the loveಶಿವಮೊಗ್ಗ: ಲೋಕಸಭೆ ಚುನಾವಣೆ ಶಿವಮೊಗ್ಗ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರು ಚುನಾವಣೆ ಪ್ರಚಾರದ ವೇಳೆ ಹಾಗೂ ಸಭೆಗಳಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ