ಬೆಂಗಳೂರು: ಈ ಬಾರಿ ವರುಣದ ರೌದ್ರಾವತಾರಕ್ಕೆ ದೇಶ-ವಿದೇಶಗಳ ಹಲವು ಪ್ರದೇಶಗಳು ನಲುಗಿ ಹೋಗಿವೆ. ಕರ್ನಾಟಕದಲ್ಲಿಯೂ ಈ ಬಾರಿ ಮಳೆ ಸೃಷ್ಟಿಸಿರುವ ಅವಾಂತರ ಅಷ್ಟಿಷ್ಟಲ್ಲ. ಅದರಲ್ಲಿಯೂ ಬೆಂಗಳೂರು ಕೂಡ ಈ ಹಿಂದೆ ಕಾಣದಷ್ಟು ಭೀಕರ ಪರಿಣಾಮವನ್ನು ಈ ಬಾರಿ ಕಂಡಿದೆ.
ಇದಕ್ಕೆ ಮೂಲ ಕಾರಣ ಬೆನ್ನತ್ತಿ ಹೋದಾಗ ಸಿಕ್ಕಿದ್ದು, ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಹಲವು ಬಹುಮಹಡಿ ಕಟ್ಟಡ ನಿರ್ಮಾಣವಾದದ್ದು.
ಈ ಹಿಂದೆ ಕೂಡ ರಾಜಕಾಲುವೆ ಒತ್ತುವರಿಗೆ ಸಂಬಂಧಿಸಿದಂತೆ ಭಾರಿ ಗಲಾಟೆ ನಡೆದಿದ್ದರೂ, ಒತ್ತುವರಿ ತೆರವುಗೊಳಿಸುವಂತೆ ಖುದ್ದು ನ್ಯಾಯಾಲಯವೇ ಸೂಚಿಸಿದ್ದರೂ ಆ ಬಗ್ಗೆ ಸರ್ಕಾರಗಳು ಕಠಿಣ ಕ್ರಮ ತೆಗೆದುಕೊಂಡಿರಲಿಲ್ಲ. ಆದರೆ ಈ ಬಾರಿ ಮಾತ್ರ ಸರ್ಕಾರ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಇದಾಗಲೇ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ರಾಜಕಾಲುವೆ ಒತ್ತುವರಿ ಕಟ್ಟಡಗಳ ತೆರವಿನ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ.
ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿರುವವರಿಗೆ ಕಟ್ಟಡ ತೆರವುಗೊಳಿಸುವಂತೆ ಇದಾಗಲೇ ನೋಟಿಸ್ ನೀಡಲಾಗಿದೆ. ಇದರಿಂದ ಹೌಹಾರಿಹೋಗಿರುವ ಕಟ್ಟಡಗಳ ಮಾಲೀಕರು ಅತ್ತು-ಕರೆದು ಮಾಡುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ತನ್ನ ನಿರ್ಧಾರಕ್ಕೆ ಬದ್ಧವಾಗಿದ್ದು, ಯಾವುದೇ ಕಾರಣಕ್ಕೂ ಕಟ್ಟಡ ನೆಲಸಮ ಕಾರ್ಯದಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.