ಬೆಂಗಳೂರು: ಡ್ರಗ್ಸ್ ಮಾಫಿಯಾದಲ್ಲಿ ನಟಿಯರಷ್ಟೇ ಅಲ್ಲ ನಟರು, ರಾಜಕಾರಣಿಗಳ ಮಕ್ಕಳು, ಹಿರಿಯ ನಿರ್ದೇಶಕರ ಮಕ್ಕಳಿದ್ದಾರೆ. ಸರ್ಕಾರದಲ್ಲೇ ಕೆಲಸ ಮಾಡುತ್ತಿರುವ ಹಿರಿಯ ನಿರ್ದೇಶಕರ ಮಗನನ್ನ ಯಾಕೆ ಇನ್ನೂ ಕರೆಸಿಲ್ಲ? ಬೇರೇ ಇಲ್ಲದೆ ಇರುವವರನ್ನು ಕರೆದುಕೊಂಡು ಬಂದು ಸುಮ್ಮನೆ ವಿಚಾರಣೆ ಮಾಡುತ್ತಿದ್ದಾರೆ. ಹೀಗಾಗಿ ಇದು ಯಾವುದೇ ರಾಜಕೀಯ ಪ್ರಭಾವ ಇಲ್ಲದೆ ನಡೆಸುತ್ತಿರುವ ವಿಚಾರಣೆ ಎಂದು ನಮಗೆ ಅನ್ನಿಸುತ್ತಿಲ್ಲ ಎಂದು ನಟ, ನಿರ್ದೇಶಕ ಇಂದ್ರಜಿತ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಂದ್ರಜಿತ್, ನನಗೆ ಗೊತ್ತಿರುವ ವಿಚಾರವನ್ನು ಸಿಸಿಬಿ ಮುಂದೆ ಹೇಳಿದ್ದೇನೆ. ಈ ಮೂಲಕ ಇಡೀ ಕರ್ನಾಟಕಕ್ಕೆ, ವಿದ್ಯಾರ್ಥಿಗಳಿಗೆ, ಯುವಕರಿಗೆ ಡ್ರಗ್ಸ್ ಸೇವನೆ ಮಾಡುವುದು ತಪ್ಪು ಎಂಬ ಸಂದೇಶ ಹೋಗಿದೆ. ಆದರೆ ನಾನು ಸಿಸಿಬಿಗೆ ಮಾಹಿತಿ ಕೊಟ್ಟ ನಂತರ ಆದ ಬೆಳವಣಿಗೆ ಅಷ್ಟು ಖುಷಿ, ಸಂತೋಷ ಕೊಟ್ಟಿಲ್ಲ. ಏನು ಆಗಬೇಕಿತ್ತೋ ಅದು ಇನ್ನೂ ಹೆಚ್ಚಾಗಿ ಆಗಬೇಕಿತ್ತು. ನಮ್ಮ ಪೊಲೀಸರು ಕೆಲಸ ಮಾಡುತ್ತಿದ್ದರೂ ಎಲ್ಲೋ ಒಂದುಕಡೆ ಕೈ ಕಟ್ಟಿ ಹಾಕಿರುವಾಗಿದೆ ಎಂದು ಅಭಿಪ್ರಾಯಪಟ್ಟರು.
ಡ್ರಗ್ಸ್ ಮಾಫಿಯಾದಲ್ಲಿ ನಟಿಯಷ್ಟೇ ಅಲ್ಲ ನಟರು, ರಾಜಕಾರಣಿಗಳ ಮಕ್ಕಳು, ಹಿರಿಯ ನಿರ್ದೇಶಕರ ಮಕ್ಕಳಿದ್ದಾರೆ. ಈವೆಂಟ್ ಮ್ಯಾನೇಜರ್ಗಳು, ಹಲವಾರು ರಾಜಕಾರಣಿಗಳು ಇದ್ದಾರೆ. ಆದರೆ ಇಲ್ಲಿ ಇಬ್ಬರೂ ನಟಿಯನ್ನು ಮಾತ್ರ ಅರೆಸ್ಟ್ ಮಾಡಿ, ಇಲ್ಲಿ ಎಲ್ಲೂ ಬೇರೇ ಇಲ್ಲದೆ ಇರುವವರನ್ನು ಕರೆದುಕೊಂಡು ಬಂದು ನಾಮಕಾವಸ್ಥೆಗೆ ಮಾಡಿದಂತೆ ಇದೆ. ಯಾವುದೇ ರಾಜಕೀಯ ವ್ಯಕ್ತಿಗಳ ಒತ್ತಡವಿಲ್ಲದೆ, ಯಾರ್ಯಾರು ದೊಡ್ಡ ವ್ಯಕ್ತಿಗಳಿದ್ದಾರೆ, ನಟರ ಮಕ್ಕಳು, ರಾಜಕಾರಣಿಗಳ ಮಕ್ಕಳು, ಹಿರಿಯ ನಿರ್ದೇಶಕರ ಮಕ್ಕಳನ್ನು ಕರೆಸಿ ಕೂಲಂಕುಶವಾಗಿ ವಿಚಾರಣೆ ಮಾಡಬೇಕು. ಆಗ ನಿಮ್ಮ ಬಗ್ಗೆ ನಮಗೆ ಗೌರವ ಹೆಚ್ಚಾಗುತ್ತದೆ. ಆಗ ಇಡೀ ಕರ್ನಾಟಕಕ್ಕೆ ಒಂದು ಸಂದೇಶ ಕೊಟ್ಟದಂತಾಗುತ್ತದೆ ಎಂದು ಸಿಸಿಬಿ ತನಿಖೆ ಬಗ್ಗೆ ಮಾತನಾಡಿದರು.