ಬೆಳಗಾವಿ – ಐಎಎಸ್ ಅಧಿಕಾರಿಯಾಗಿ ಈಚೆಗಷ್ಟೆ ಭಡ್ತಿ ಪಡೆದಿರುವ ಬೆಳಗಾವಿಯ ಮಲಪ್ರಭಾ, ಘಟಪ್ರಭಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ(ಕಾಡಾ) ಆಡಳಿತಾಧಿಕಾರಿ ಶಶಿಧರ ಕುರೇರ ಅವರನ್ನು ವರ್ಗಾವಣೆ ಮಾಡಲಾಗಿದೆ.
ರಾಯಚೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನಾಗಿ ಕುರೇರ ಅವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ. ರಾಯಚೂರು ಜಿಲ್ಲಾ ಪಂಚಾಯಿತಿ ಹಾಲಿ ಸಿಇಒ ಚಂದ್ರಶೇಖರ ನಾಯಕ ಅವರ ಸ್ಥಾನದಲ್ಲಿ ಕುರೇರ ಅವರು ನೇಮಕವಾಗಿದ್ದು, ಇದು ಐಎಎಸ್ ಅಧಿಕಾರಿಯಾಗಿ ಅವರ ಮೊದಲ ಹುದ್ದೆಯಾಗಿದೆ.
ಕುರೇರ ಅವರು ಕೆಎಎಸ್ ಹುದ್ದೆಯಲ್ಲಿ ಬೆಳಗಾವಿಯಲ್ಲಿ ಮಹಾನಗರ ಪಾಲಿಕೆ ಆಯುಕ್ತರಾಗಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ, ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದಾರೆ.