ವಿಜಯಪುರ: ತಾಳ್ಮೆಯಿಂದ ಇರುವ ಮನುಷ್ಯ ಸಹನೆ-ವಿವೇಕದಿಂದ ಎಲ್ಲವನ್ನೂ ಗೆಲ್ಲುವ ಶಕ್ತಿ ಹೊಂದಿರುತ್ತಾನೆ. ಸಿಟ್ಟು-ಕೋಪ, ಆವೇಶದಂಥ ಗುಣಗಳು ಜೀವನದಲ್ಲಿ ಸೋಲನ್ನೇ ತರುತ್ತದೆ. ಲೋಕದ ದೃಷ್ಟಿಯಲ್ಲಿ ಜೈಲಿನಲ್ಲಿರುವ ಕೈದಿಗಳು ಹೃದಯ ಪರಿವರ್ತಿಸಿಕೊಂಡ ಪ್ರವಾದಿಗಳಾಗಿ, ಬಸವಾದಿ ಪ್ರಥಮರಾಗಿ, ಗೌತಮ ಬುದ್ಧರಾಗಿ ಜೀವಿಸಲು ಇರುವ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕುಂಟೋಜಿ ಹಿರೇಮಠದ ಡಾ| ಚನ್ನವೀರ ದೇವರು ಕಿವಿಮಾತು ಹೇಳಿದರು.
ನಗರದ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಶ್ರಾವಣ ಮಾಸದ ನಿಮಿತ್ತ ಕುಮಾರೇಶ್ವರ ಜೀವನ ವಿಕಾಸ ಫೌಂಡೇಶನ್, ಬಸವನಬಾಗೇವಾಡಿಯ ವಿಶ್ವಬಂಧು ಬಸವ ಸಮಿತಿ, ಕುಂಟೋಜಿ ಯಶಸ್ವಿನಿ ಮಹಿಳಾ ಬಳಗದ ಸಹಯೋಗದಲಿ ಕೈದಿಗಳಿಗೆ ಹಮ್ಮಿಕೊಂಡಿದ್ದ ರುದ್ರಾಕ್ಷಿ ದೀಕ್ಷೆ, ವಿಭೂತಿ ವಿತರಣೆ, ವಚನ ಪುಸ್ತಕಗಳ ವಿತರಣೆ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತಪ್ಪು ಮಾಡುವುದು ತಪ್ಪಲ್ಲ. ತಪ್ಪು ಅಂತಾ ತಿಳಿದ ಮೇಲೂ ಮಾಡುವ ತಪ್ಪೇ ತಪ್ಪು. ಮಹಾತ್ಮ ಗಾಂಧಿಜಿ ಜೈಲಿನಲ್ಲಿ ಇದ್ದುಕೊಂಡೇ ಆತ್ಮ ಕಥನ ಬರೆದರು. ಸುಭಾಷ್ಚಂದ್ರ ಬೋಸ್, ಭಗತಸಿಂಗ್ ಅವರ ಆದರ್ಶಗಳು, ಬಸವಾದಿ ಶರಣರ ವಚನಗಳನ್ನು ಕಂಠಪಾಠ ಮಾಡಿದಲ್ಲಿ ಜೀವನದಲ್ಲಿ ಮಹಾ ಮಾನವರಾಗಲು ಸಾಧ್ಯವಿದೆ ಎಂದು ಮಾರ್ಗದರ್ಶನ ಮಾಡಿದರು.
ವಿಜಯಪುರ ಜಿಲ್ಲಾ ಕೇಂದ್ರ ಕಾರಾಗೃಹದ ಅಧೀಕ್ಷಕ ಜೆ.ಐ. ಮ್ಯಾಗೇರಿ ಮಾತನಾಡಿ, ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳನ್ನು ಸನ್ನಡತೆ ಆದರದ ಮೇಲೆ ಕೆಲವರು ಈ ವರ್ಷ ಬಿಡುಗಡೆ ಆಗಲಿದ್ದಾರೆ. ಇತರೆ ಕೈದಿಗಳು ಸಹ ಸನ್ನಡನೆ ಮೂಲಕ ನಿಮ್ಮ ಜೀವನವನ್ನು ಉತ್ತಮವಾಗಿಸಿಕೊಳ್ಳಿ ಎಂದು ಸಲಹೆ ನೀಡಿದರು.