ಬೆಂಗಳೂರು: ದಿಲ್ಲಿ, ಮುಂಬಯಿ, ಸೂರತ್ನಂತಹ ಬೃಹತ್ ನಗರಗಳಲ್ಲಿ ನಡೆಯುತ್ತಿದ್ದ ಹನಿಟ್ರ್ಯಾಪ್ ದಂಧೆ ಈಗ ರಾಜ್ಯಾದ್ಯಂತ ವಿಸ್ತರಿಸಿದೆ. ಶ್ರೀಮಂತರು, ರಾಜಕಾರಣಿಗಳು, ಉದ್ಯಮಿಗಳು, ಉನ್ನತ ಹುದ್ದೆಯಲ್ಲಿರುವ ಸರಕಾರಿ ಅಧಿಕಾರಿಗಳು, ಟೆಕ್ಕಿಗಳೇ ಈ ಗ್ಯಾಂಗ್ನ ಟಾರ್ಗೆಟ್!
ರಾಜ್ಯದಲ್ಲಿ ಹನಿಟ್ರ್ಯಾಪ್ ದಂಧೆ ಎಗ್ಗಿಲ್ಲದೇ ನಡೆಯುತ್ತಿದ್ದು, ಸುಂದರ ಮಾನಿನಿಯರನ್ನು ಛೂ ಬಿಟ್ಟು ಶ್ರೀಮಂತ ಕುಳಗಳಿಗೆ ಗಾಳ ಹಾಕುವ ಹತ್ತಾರು ಗ್ಯಾಂಗ್ಗಳು ಸಕ್ರಿಯವಾಗಿದೆ. ಹನಿಟ್ರ್ಯಾಪ್ ಉರುಳಿಗೆ ಸಿಲುಕಿ ಲಕ್ಷಾಂತರ ರೂ. ಕಳೆದುಕೊಂಡ ಬಹಳಷ್ಟು ಮಂದಿ ಮಾನಕ್ಕೆ ಅಂಜಿ ಠಾಣೆ ಮೆಟ್ಟಿಲೇರುತ್ತಿಲ್ಲ. ಈ ಗ್ಯಾಂಗ್ಗಳು ವಾರ್ಷಿಕವಾಗಿ ಕೋಟ್ಯಂತರ ರೂ. ಲೂಟಿ ಹೊಡೆಯುತ್ತಿವೆ ಎನ್ನುವ ಅಂಶವನ್ನು ಹಿರಿಯ ಪೊಲೀಸ್ ಅಧಿಕಾರಿಗಳೇ “ಉದಯವಾಣಿ’ಗೆ ತಿಳಿಸಿದ್ದಾರೆ.
ಏನಿದು ಹನಿಟ್ರ್ಯಾಪ್ ದಂಧೆ?
ಉದ್ಯಮಿಗಳು, ರಾಜಕಾರಣಿಗಳು ಸೇರಿ ಶ್ರೀಮಂತರ ಚಲನವಲನ ಗಮನಿಸುವ ಆರೋಪಿಗಳು ತಮ್ಮ ಗ್ಯಾಂಗ್ನಲ್ಲಿರುವ ಯುವತಿಯರಿಗೆ ಅವರ ಮಾಹಿತಿ ರವಾನಿಸುತ್ತಾರೆ. ಇತ್ತ ಯುವತಿಯರು ಕೆಲಸ, ವೈಯಕ್ತಿಕ ಸಮಸ್ಯೆ, ವ್ಯವಹಾರ ಕುದುರಿಸುವ ನೆಪದಲ್ಲಿ ಆ ವ್ಯಕ್ತಿಗಳನ್ನು ಸಂಪರ್ಕಿಸಿ ಆತ್ಮೀಯವಾಗಿ ಮಾತನಾಡುತ್ತಾರೆ. ಅನಂತರ ದೈಹಿಕ ಸಂಪರ್ಕ ಬೆಳೆಸಲು ಒಪ್ಪಿಸಿ ತಾವಿದ್ದಲ್ಲಿಗೆ ಕರೆಸಿಕೊಳ್ಳುತ್ತಾರೆ. ಬಳಿಕ ಖಾಸಗಿ ದೃಶ್ಯವನ್ನು ಮೊಬೈಲ್, ಮೈಕ್ರೋ ಕೆಮರಾ, ಸಿಸಿ ಕೆಮರಾಗಳಲ್ಲಿ ಸೆರೆ ಹಿಡಿಯುತ್ತಾರೆ.
ವೀಡಿಯೋವನ್ನು ಗ್ಯಾಂಗ್ನ ಕಿಂಗ್ಪಿನ್ಗಳಿಗೆ ಒಪ್ಪಿಸುವ ಯುವತಿಯರು ಕೃತ್ಯಕ್ಕೆ ಕೈತುಂಬ ದುಡ್ಡು ಪಡೆಯುತ್ತಾರೆ. ಇತ್ತ ಕಿಂಗ್ಪಿನ್ಗಳು ಹನಿಟ್ರ್ಯಾಪ್ ಖೆಡ್ಡಾಗೆ ಬಿದ್ದ ವ್ಯಕ್ತಿಗಳಿಗೆ ವೀಡಿಯೋ ಕಳುಹಿಸಿ ಲಕ್ಷಾಂತರ ರೂ.ಗಳಿಗೆ ಬೇಡಿಕೆ ಇಡುತ್ತಾರೆ. ಹಣ ಕೊಡದಿದ್ದರೆ ಸಾಮಾಜಿಕ ಜಾಲತಾಣ ಅಥವಾ ಇನ್ನಿತರ ಕಡೆ ವೀಡಿಯೋ ವೈರಲ್ ಮಾಡುವುದಾಗಿ ಬೆದರಿಸುತ್ತಾರೆ.
ಆನ್ಲೈನ್ ಟ್ರ್ಯಾಪ್
ಇತ್ತೀಚೆಗೆ ಆನ್ಲೈನ್ನಲ್ಲೇ ವೀಡಿಯೋ ಕರೆ ಮಾಡಿ ಆಕರ್ಷಕ ಮಾತುಗಳನ್ನಾಡುವ ಯುವತಿಯರು ಪುರುಷರನ್ನು ಬಲೆಗೆ ಬೀಳಿಸುತ್ತಾರೆ. ಮಾತಿಗೆ ಮರುಳಾಗಿ ಅವರು ಹೇಳಿದಂತೆ ಕೇಳಿದರೆ ನಗ್ನ ವೀಡಿಯೋ ಸೆರೆಹಿಡಿದು ಹನಿಟ್ರ್ಯಾಪ್ಗೆ ಗುರಿಯಾಗಿಸಿ ಲಕ್ಷಾಂತರ ರೂ. ಲಪಟಾಯಿಸುತ್ತಾರೆ.