ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆ.10ರಿಂದ 16ರವರೆಗೆ ಶ್ರೀರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವ ನಿಮಿತ್ತ ಸಪ್ತರಾತ್ರೋತ್ಸವವು ಜರುಗಲಿದೆ.
ಶ್ರೀಮಠದ ಪೀಠಾಧಿ ಪತಿ ಶ್ರೀ ಸುಬುಧೇಂದ್ರ ತೀರ್ಥರ ಸಾನ್ನಿಧ್ಯದಲ್ಲಿ ಕಾರ್ಯಕ್ರಮಗಳು ಜರುಗಲಿವೆ.
ಈ ವರ್ಷ ಮಂತ್ರಾಲಯದ ವಿದ್ವಾನ್ ಅರ್ಚಕ ಕೃಷ್ಣಾಚಾರ್, ಆಂಧ್ರಪ್ರದೇಶದ ನಿವೃತ್ತ ಡಿಜಿಪಿ ಆರ್.ಪ್ರಭಾಕರರಾವ್, ತಿರುವನಂತಪುರದ ವಿದ್ವಾನ್ ಆರ್.ಕೃಷ್ಣಮೂರ್ತಿ ಶಾಸ್ತ್ರಿ, ಬೆಂಗಳೂರಿನ ವಿದ್ವಾನ್ ಮಾಳಗಿ ರಾಮಾಚಾರ, ಮೈಸೂರಿನ ವಿದ್ವಾನ್ ಸಿ.ಎಚ್. ಶ್ರೀನಿವಾಸಮೂರ್ತಿ, ಆಂಧ್ರಪ್ರದೇಶದ ಧಾರ್ಮಿಕ ದತ್ತಿ ಇಲಾಖೆ ನಿವೃತ್ತ ಜಂಟಿ ಆಯುಕ್ತ ಎಲ್. ಮಾಧವಶೆಟ್ಟಿ, ಕರ್ನೂಲ್ನ ಡಾ|ಜಿ.ಆರ್ ಚಂದ್ರಶೇಖರ, ಹುಬ್ಬಳ್ಳಿಯ ಡಾ|ವಿ.ಜಿ ನಾಡಗೌಡ, ದಾನಿ ಎಂ.ಸೋಮಶೇಖರ ಅವರಿಗೆ ಶ್ರೀ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
12ರಂದು ಶ್ರೀಗುರು ಸಾರ್ವಭೌಮರ ಪೂರ್ವಾರಾಧನೆ ನಿಮಿತ್ತ ರಜತ ಸಿಂಹ ವಾಹನೋತ್ಸವ, 13ರಂದು ಮಧ್ಯಾರಾಧನೆ, ಗಜ-ರಜತ-ಸ್ವರ್ಣ ರಥೋತ್ಸವ ನಡೆಯಲಿದೆ.
14ರಂದು ಉತ್ತರಾರಧನಾ ಮಹೋತ್ಸವದ ನಿಮಿತ್ತ ಮಹಾರಥೋತ್ಸವ ನಡೆಯಲಿದೆ.
15ರಂದು ಶ್ರೀಸುಗುಣೇಂದ್ರ ತೀರ್ಥರ ಆರಾಧನೆ, 16ರಂದು ಸರ್ವ ಸಮರ್ಪಣೋತ್ಸವ ಕಾರ್ಯಕ್ರಮ ನಡೆಯಲಿದೆ.
ಶ್ರೀರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ನಿಮಿತ್ತ ಪ್ರತಿದಿನವೂ ವಿದ್ವಾಂಸರಿಂದ ಪ್ರವಚನ, ಉಪನ್ಯಾಸ, ವಿವಿಧ ಸಂಗೀತ ಕಲಾವಿದರಿಂದ ದಾಸವಾಣಿ ಕಾರ್ಯಕ್ರಮ, ಭರತನಾಟ್ಯ, ನೃತ್ಯ ರೂಪಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಶ್ರೀಮಠ ತಿಳಿಸಿದೆ.