ನಿಪ್ಪಾಣಿ (ಬೆಳಗಾವಿ): ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನ ಮಾಂದೂರು ಗ್ರಾಮದ ಬಳಿ ದೂಧಗಂಗಾ ನದಿಯಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿಯೊಬ್ಬರು ಶನಿವಾರ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಮಾಂದೂರಿನ ನಿವಾಸಿ ಶಿವಾಜಿ ಕೊರವಿ (54) ಮೃತಪಟ್ಟವರು.
ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಮುಂದುವರಿದಿದ್ದು, ಗ್ರಾಮದ ಹೊರವಲಯದಲ್ಲಿ ದೂಧಗಂಗಾ ನದಿ ಧುಮ್ಮಿಕ್ಕುತ್ತಿದೆ. ಶನಿವಾರ ಬೆಳಿಗ್ಗೆ ಮೀನು ಹಿಡಿಯಲು ನದಿಗೆ ಇಳಿದಿದ್ದ ಶಿವಾಜಿ ನೋಡನೋಡುತ್ತಿದ್ದಂತೆ ನೀರಿನ ಸೆಳವಿಗೆ ಸಿಕ್ಕು ತೇಲಿಹೋದರು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಶಿವಾಜಿ ಅವರ ದೇಹ ಪತ್ತೆ ಮಾಡಿದರು. ಮರಣೋತ್ತರ ಪರೀಕ್ಷೆಗಾಗಿ ದೇಹವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು.