ಬೆಂಗಳೂರು – ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಐಪಿಎಸ್ ಅಧಿಕಾರಿಗಳಾದ ಹೇಮಂತ ನಿಂಬಾಳಕರ್ ಮತ್ತು ಅಜಯ್ ಹಿಲೋರಿ ವಿರುದ್ಧ ಸಿಬಿಐ ವಿಚಾರಣೆ ನಡೆಸಲು ಸರಕಾರ ಅನುಮತಿ ನೀಡಿದೆ.
ಈ ಸಂಬಂಧ ಸುದೀರ್ಘ ಕಾನೂನುಗಳನ್ನು ಪರಿಶೀಲಿಸಿದ ಸರಕಾರ, ಅಡ್ವೋಕೇಟ್ ಜನರಲ್ ಸಲಹೆ ಪಡೆದು ಸಿಬಿಐ ಕೋರಿಕೆಯಂತೆ ಮತ್ತು ಸಿಬಿಐ ನಡೆಸಿರುವ ಪ್ರಾಥಮಿಕ ತನಿಖಾ ವರದಿಯನ್ನು ಉಲ್ಲೇಖಿಸಿ ತನಿಖೆಗೆ ಒಪ್ಪಿಗೆ ಸೂಚಿಸಿದೆ.
ಐಎಂಎ ವಂಚನೆ ಪ್ರಕರಣ ಹೊರಬರುವ ಕೆಲವೇ ಸಮಯ ಮೊದಲು, ಸಂಸ್ಥೆಯ ವಿರುದ್ಧ ಸಾವಿರಾರು ದೂರುಗಳಿದ್ದಾಗ್ಯೂ ಸಂಸ್ಥೆಗೆ ಅಂದಿನ ಸಿಐಡಿ ಇನಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿಪಿ) ಹೇಮಂತ ನಿಂಬಾಳಕರ್ ಕ್ಲೀನ್ ಚಿಟ್ ನೀಡಿದ್ದರು, ಇದರ ಹಿಂದೆ ಲಂಚದ ವ್ಯವಹಾರ ನಡೆದಿದೆ ಎನ್ನುವ ಆರೋಪ ಅವರ ಮೇಲಿದೆ.
ಹಾಗೆಯೇ ಇನ್ನೋರ್ವ ಐಪಿಎಸ್ ಅಧಿಕಾರಿ ಅಜಯ ಹಿಲೋರಿ ವಿರುದ್ಧ ಕೂಡ ತನಿಖೆಗೆ ಸರಕಾರದ ಅನುಮತಿ ಕೇಳಲಾಗಿತ್ತು.
ಕರ್ನಾಟಕ ಸರಕಾರ ಐಎಂಎ ಹಗರಣ ತನಿಖೆಗೆ ವಿಶೇಷ ತನಿಖಾದಳ ರಚಿಸಿತ್ತು. ನಂತರದಲ್ಲಿ ಪ್ರಕರಣದ ವ್ಯಾಪಕತೆ ಆಧರಿಸಿ ಸಿಬಿಐ ತನಿಖೆಗೆ ವರ್ಗಾಯಿಸಲಾಗಿದೆ. ಇದರಲ್ಲಿ 30 ಜನ ಪ್ರಮುಖ ಆರೋಪಿಗಳನ್ನು ಹೆಸರಿಸಲಾಗಿದೆ.
ಸುಮಾರು 2500 ಕೋಟಿ ರೂಗಳಿಗಿಂತ ಹೆಚ್ಚಿನ ಮೊತ್ತದ ಹಗರಣ ನಡೆಸಿರುವ ಆರೋಪ ಐಎಂಎ ಸಂಸ್ಥೆಯ ಮೇಲಿದೆ.