ಬೆಳಗಾವಿ, ಜೂನ್ 20: ಸೇನೆಗೆ ಸೇರಿ ಅಲ್ಪಾವಧಿಗೆ ಸೇವೆ ಸಲ್ಲಿಸಲು ಯುವಕರಿಗೆ ಅವಕಾಶ ಕಲ್ಪಿಸುವ ಅಗ್ನಿಪಥ್ ಸ್ಕೀಂ ಬಗ್ಗೆ ವ್ಯಾಪಕ ವಿರೋದ ವ್ಯಕ್ತವಾಗುತ್ತಿದೆ. ದೇಶದ ಹಲವು ಭಾಗಗಳಲ್ಲಿ ಇಂದು (ಜೂನ್ 20) ಭಾರತ್ ಬಂದ್ ಕರೆ ನೀಡಲಾಗಿದೆ. ವಿರೋಧ ಪಕ್ಷ ಕಾಂಗ್ರೆಸ್ ಮೋದಿ ಸರಕಾರವನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಳ್ಳುತ್ತಿದೆ.
ಅಗ್ನಿಪಥ್ ಸ್ಕೀಂ ಬಗ್ಗೆ ಕಾಂಗ್ರೆಸ್ ನಾಯಕಿ ಮತ್ತು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕೇಂದ್ರ ಸರಕಾರವನ್ನು ಲೇವಡಿ ಮಾಡಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಅಗ್ನಿಪಥ್ ಕೆಲಸಕ್ಕೆ ಹೋಗಲಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
“ಉದ್ಯೋಗ ಸೃಷ್ಟಿಸುವುದಾಗಿ ಹೇಳಿಕೊಂಡು ಬಿಜೆಪಿ ಅಧಿಕಾರಕ್ಕೆ ಬಂದಿದೆ, ಈಗ ಆ ಭರವಸೆಯನ್ನು ಈಡೇರಿಸಲಾಗದೇ, ಅಗ್ನಿಪಥ್ ಎನ್ನುವ ಡ್ರಾಮಾವನ್ನು ಹೊರತಂದಿದೆ. ಯಾವ ಮಂತ್ರಿ, ಶಾಸಕರ ಮಕ್ಕಳು ಅಗ್ನಿಪಥ್ ಕೆಲಸಕ್ಕೆ ಹೋಗುತ್ತಾರಾ? ಅಮಿತ್ ಶಾ ಅವರು ತಮ್ಮ ಪುತ್ರ ಜಯ್ ಶಾ ಅವರನ್ನು ಅಗ್ನಿಪಥ್ ಕೆಲಸಕ್ಕೆ ಕಳುಹಿಸಲಿ” ಎಂದು ಲಕ್ಷ್ಮೀ ಹೆಬ್ಬಾಳ್ಕರ್ ವ್ಯಂಗ್ಯವಾಡಿದ್ದಾರೆ.
“ಪ್ರಧಾನಮಂತ್ರಿ ಕರ್ನಾಟಕಕ್ಕೆ ಬರುತ್ತಿದ್ದಾರೆ, ಅವರಿಗೆ ಸೂಕ್ತ ಭದ್ರತೆ ಒದಗಿಸುವುದು ಸರಕಾರದ ಕರ್ತವ್ಯ. ಕಾನೂನು ಸುವ್ಯವಸ್ಥೆ ಹದೆಗೆಡಬಾರದು ಎಂದು ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. ಆದರೆ, ಪ್ರತೀ ದಿನ ಪ್ರತಿಭಟನೆಯನ್ನು ತಡೆಯಲು ಸಾಧ್ಯವೇ” ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನಿಸಿದ್ದಾರೆ.
“1.35 ಲಕ್ಷ ಹುದ್ದೆ ಖಾಲಿ ಇರುವಾಗ ಕೇಂದ್ರ ಸರಕಾರದ ತಲೆಗೆ ಹೊಳೆದದ್ದು ಈ ಯೋಜನೆ. ನಾಲ್ಕು ವರ್ಷ ಸ್ಕೀಂನಲ್ಲಿ ಕೆಲಸ ಮಾಡಿದ ಯುವಕರು ನಂತರ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುವುದಾ? ಬಿಜೆಪಿಯವರ ಮನಸ್ಥಿತಿ ಯಾವರೀತಿ ಇದೆ ಎಂದು ಇದರಿಂದ ತಿಳಿಯುತ್ತದೆ”ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಕೇಂದ್ರ ಸರಕಾರದ ವಿರುದ್ದ ಕಿಡಿಕಾರಿದ್ದಾರೆ.
ಅಗ್ನಿಪಥ್ ನೇಮಕಾತಿಯ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಸರಕಾರ, ಈ ಯೋಜನೆಯಲ್ಲಿ ನೇಮಕವಾಗುವ ಸೈನಿಕರಿಗೆ ನಾಲ್ಕು ವರ್ಷದ ನಿವೃತ್ತಿಯ ನಂತರ ಉದ್ಯಮಿಗಳಾಗಲು ಬಯಸುವವರಿಗೆ ಹಣಕಾಸಿನ ಪ್ಯಾಕೇಜ್ ಮತ್ತು ಬ್ಯಾಂಕ್ ಸಾಲ ಯೋಜನೆ ಸಿಗುತ್ತದೆ. ಅಧ್ಯಯನ ಮಾಡಲು ಬಯಸುವವರಿಗೆ 12 ನೇ ತರಗತಿಯ ಪ್ರಮಾಣಪತ್ರಕ್ಕೆ ಸಮಾನವಾದ ಪ್ರಮಾಣಪತ್ರವನ್ನು ನೀಡಲಾಗುತ್ತದೆ ಮತ್ತು ಹೆಚ್ಚಿನ ಅಧ್ಯಯನಕ್ಕಾಗಿ ಬ್ರಿಡ್ಜಿಂಗ್ ಕೋರ್ಸ್ ಅನ್ನು ನೀಡಲಾಗುತ್ತದೆ ಎಂದು ಮೋದಿ ಸರಕಾರ ಸ್ಪಷ್ಟನೆಯನ್ನು ನೀಡಿತ್ತು