ಗದಗ: ಕರ್ತವ್ಯ ನಿರತ ಪೊಲೀಸ್ ಪೇದೆಯೋರ್ವ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗದಗ ಜಿಲ್ಲಾಡಳಿತ ಭವನದ ಖಜಾನೆ ಕಚೇರಿನಲ್ಲಿ ನಡೆದಿದೆ.
ಡಿ.ಆರ್ ಪೊಲೀಸ್ ಪೇದೆ ಕಿರಣ್ ಕೊಪ್ಪದ ಮೃತ ವ್ಯಕ್ತಿ. ಕಿರಣ್ ಕೊಪ್ಪದ ಕರ್ತವ್ಯ ನಿರತ ವೇಳೆ ಕುತ್ತಿಗೆಗೆ ಗುಂಡಿ ಹಾರಿಸಿಕೊಂಡಿದ್ದಾನೆ. ಇದಕ್ಕೆ ಕೌಟುಂಬಿಕ ಕಲಹವೇ ಕಾರಣ ಎನ್ನಲಾಗುತ್ತಿದೆ. ಆದರೆ ಮೃತ ಪೇದೆ ತಂದೆ, ಕಿರಣ್ ಅವರು ಇತ್ತೀಚಿಗೆ ಅದ್ಯಾಕೋ ಮಾನಸಿಕ ಖಿನ್ನತೆಗೊಳಗಾಗಿದ್ದ ಎಂದು ಹೇಳಿದ್ದಾರೆ. ಸೆಕೆಂಡ್ ಶಿಫ್ಟ್ ಮುಗಿಸಿಕೊಂಡು ಮನೆಗೆ ಹೋಗುವ ಸಂದರ್ಭದಲ್ಲಿ ರೈಫಲ್ ಮೂಲಕ ಕುತ್ತಿಗೆಗೆ ಗುಂಡು ಹಾರಿಸಿಕೊಂಡು ಸ್ಥಳದಲ್ಲೆ ಪ್ರಾಣ ಬಿಟ್ಟಿದ್ದಾನೆ.
ಮೃತ ಪೇದೆ ಕಿರಣ್, ಕಳೆದ 20 ವರ್ಷಗಳಿಂದ ಡಿ.ಆರ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಐದಾರು ವರ್ಷಗಳಿಂದ ಸಂಸಾರದಲ್ಲಿ ಕಲಹ ಏರ್ಪಟ್ಟಿತ್ತು. ಪತ್ನಿ ವಿಚ್ಛೇದನಕ್ಕೆ ಮುಂದಾಗಿದ್ದಳು. ಬರುವ ಆದಾಯದಲ್ಲಿ ಅರ್ಧದಷ್ಟು ಪತ್ನಿ ಹಾಗೂ ಮಕ್ಕಳ ಜೀವನೋಪಾಯಕ್ಕೆ ಕೊಡುವಂತೆ ಕೋರ್ಟ್ ಆದೇಶವಾಗಿತ್ತು ಎನ್ನಲಾಗುತ್ತಿದೆ.