ಬಾಗಲಕೋಟೆ, ಜೂನ್ 9: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವ ಗಾದೆಗೆ ಮಾತನಂತೆ, ದಿನಾಲು ಲಕ್ಷಾಂತರ ರೂಪಾಯಿಯನ್ನು ನೋಡುತ್ತಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡುವ ಕ್ಯಾಷಿಯರ್, ತಾನೂ ಉದ್ಯೋಗ ಮಾಡುವ ಬ್ಯಾಂಕ್ನಲ್ಲಿಯೇ ಅಧಿಕಾರವನ್ನು ದುರಪಯೋಗಪಡಿಸಿಕೊಂಡು ಬರೋಬ್ಬರಿ 1 ಕೋಟಿ, 60 ಲಕ್ಷ ರೂಪಾಯಿಗಳನ್ನು ಲಪಟಾಯಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬಾಗಲಕೋಟೆ ಜಿಲ್ಲೆಯ ನವನಗರದ ಎಸ್ ಬಿಐ ಬ್ಯಾಂಕ್ ನಲ್ಲಿ ಕ್ಯಾಷಿಯರ್ ಹುದ್ದೆಯಲ್ಲಿದ್ದು,ಲಕ್ಷಾಂತರ ಹಣವನ್ನು ಪ್ರತಿಧಿನ ನೋಡುತ್ತಿದ್ದ ಆತ ತನ್ನ ಜವಾಬ್ದಾರಿಯನ್ನು ಮರೆತು ಮೋಸ ಮಾಡಿ, ಕೊನೆಗೆ ಪೊಲೀಸರ ಅತಿಥಿಯಾಗಿದ್ದಾನೆ. ಜಿಲ್ಲೆಯ ನವನಗರದ ಎಸ್ ಬಿ ಐ ಬ್ಯಾಂಕ್ನ ಕ್ಯಾಷಿಯರ್ ಸಂತೋಷ ಕಬಾಡೆ ಬರೊಬ್ಬರಿ 1.6 ಕೋಟಿ ರೂ ಹಣ ವಂಚನೆ ಮಾಡಿದ್ದಾನೆ. ಸಂತೋಷ ಕಳೆದ ಮೂರು ತಿಂಗಳಿನಿಂದ ಟೆಲ್ಲರ್ ಐಡಿ ನಂಬರ್ ಮೂಲಕ ತನ್ನ ಪತ್ನಿ ಪೂಜಾ ಕಬಾಡೆ ಹಾಗೂ ತಾಯಿ ಜನಾಬಾಯಿ ಕಬಾಡೆ ಖಾತೆಗೆ ಬ್ಯಾಂಕಿನ ಆರ್ ಬಿ ಐ ಕರೆನ್ಸಿ ಚೆಸ್ಟ್ ನಲ್ಲಿರುವ ಹಣವನ್ನು ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿದೆ.
ಈ ವಿಚಾರ ಗೊತ್ತಾಗುತ್ತಿದ್ದಂತೆ ಬ್ಯಾಂಕಿನ ಮ್ಯಾನೇಜರ್ ಅಲ್ಲಪ್ಪ ಲಕ್ಷೆಟ್ಟಿ ಬಾಗಲಕೋಟೆ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಸಂತೋಷ ಕಬಾಡೆಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.