ಬೆಳಗಾವಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ವಿಜಯಪುರ ಜಿಲ್ಲೆಯಾದ್ಯಂತ ಕಳೆದ ವಾರ ಸುರಿದ ಅಕಾಲಿಕವಾಗಿರುವ ಮಳೆ ನೈಸರ್ಗಿಕ ಮಾನ್ಸೂನುಗಳಿಂದಾದುದಲ್ಲ ಬದಲಾಗಿ ಸೈಕ್ಲೋನ್ ಪರಿಣಾಮದಿಂದಾದ ಮಳೆಯಾಗಿರುತ್ತದೆ. ಆದ್ದರಿಂದ ರೈತರಿಗೆ ಸದ್ಯ ಬಿತ್ತುಣಿಕೆಗೆ ಭೂಮಿಯನ್ನು ಹದ ಮಾಡಿಕೊಳ್ಳಲು ಮತ್ತು ಮಾಗಿ ಉಳುಮೆ ಮಾಡಲು ಅವಕಾಶ ಇದೆ.
ಪ್ರಸ್ತುತ ಭೂಮಿಯ ತೇವಾಂಶ ಸಂಪೂರ್ಣ ಹೊಂದಿದ್ದರೂ ಕೂಡ ಮುಂಗಾರು ಬಿತ್ತನೆಗೆ ಇದು ಸೂಕ್ತ ಸಮಯವಲ್ಲ. ಈಗ ದಿನದಿಂದ ದಿನಕ್ಕೆ ಉಷ್ಣಾಂಶದ ಪ್ರಮಾಣ ಹೆಚ್ಚಾಗುತ್ತಿರುವುದರ ಜೊತೆಗೆ ಮುಂಗಾರು ಮಾನ್ಸೂನ್ಗಳು ಸ್ವಲ್ಪ ತಡವಾಗಿ ರಾಜ್ಯಕ್ಕೆ ಆಗಮಿಸುವ ಸೂಚನೆ ಇದೆ. ಇವೆಲ್ಲ ಪರಿಗಣಿಸಿ ರೈತರು ಸದ್ಯ ಬಿತ್ತನೆಗೆ ಮುಂದಾಗದೆ ಮುಂದೂಡಿ ಸಂಪೂರ್ಣ ಮಳೆಯಾಗಿ ಉತ್ತಮ ತೇವಾಂಶ ಕಂಡು ಬಂದಾಗ ಮಾತ್ರ ಬಿತ್ತನೆ ಮಾಡುವದು ಸೂಕ್ತ. ಇದರಿಂದ ಬೆಳೆಯ ಮೊಳಕೆಯ ಪ್ರಮಾಣ ಹೆಚ್ಚಾಗಿ ಆರೋಗ್ಯಕರ ಬೆಳವಣಿಗೆಗೆ ಸಹಾಯವಾಗುತ್ತದೆ ಎಂದು ಕೃಷಿ ಇಲಾಖೆ ರೈತರಿಗೆ ಸಲಹೆ ನೀಡಿದೆ.