ಬೆಳಗಾವಿ: ನಗರದ ಕನ್ನಡ ಸಾಹಿತ್ಯ ಭವನ ಆವರಣದಲ್ಲಿರುವ ಮಹಿಳಾ ಶೌಚಾಲಯಕ್ಕೆ ವ್ಯಕ್ತಿಯೊಬ್ಬ ಒಳಗಡೆ ಪ್ರವೇಶಿಸಿ ಬಾಗಿಲು ಲಾಕ್ ಮಾಡಿಕೊಂಡು ಹುಚ್ಚಾಟ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ನಗರದ ಚೆನ್ನಮ್ಮ ವೃತ್ತದಲ್ಲಿರುವ ಸಾಹಿತ್ಯ ಭವನದ ಆವರಣದಲ್ಲಿ ಮಹಿಳಾ ಶೌಚಾಲಯಕ್ಕೆ ನುಗ್ಗಿದ ವ್ಯಕ್ತಿ ಕಿತ್ತೂರು ತಾಲೂಕಿನ ಖೋದಾನಪುರ ಮೂಲದವನು ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಹುಚ್ಚಾಟ ಪ್ರದರ್ಶನ ಮಾಡುತ್ತಿದ್ದವನನ್ನು ವಶಕ್ಕೆ ಪಡೆದುಕೊಂಡರು.
ನಡೆದಿದ್ದೇನು?
ಇಂದು ಬೆಳಗ್ಗೆ 7 ಗಂಟೆಗೆ ವ್ಯಕ್ತಿಯೊಬ್ಬ ಸಾಹಿತ್ಯ ಭವನದಲ್ಲಿರುವ ಶೌಚಾಲಯಕ್ಕೆ ಹೋಗಿ ಲಾಕ್ ಮಾಡಿಕೊಂಡಿದ್ದಾನೆ. ಈ ವೇಳೆ ಹುಚ್ಚಾಟ ಪ್ರದರ್ಶನ ಮಾಡಿದ್ದು, ಸ್ಥಳೀಯರು ಭಯಗೊಂಡಿದ್ದಾರೆ. ಪರಿಣಾಮ ಭವನದ ಸಿಬ್ಬಂದಿಗಳು ಮತ್ತು ಸ್ಥಳದಲ್ಲಿದ್ದ ಪೊಲೀಸರು ಬಾಗಿಲು ತೆಗೆಸಲು ಹರಸಾಹಸಪಟ್ಟರು.
ಕಾರಣವೇನು?
ಈ ವೇಳೆ ವ್ಯಕ್ತಿ, ಪಿಎಸ್ಐ ಸ್ಥಳಕ್ಕೆ ಬರಬೇಕು ಅಲ್ಲಿವರೆಗೂ ನಾನು ಬಾಗಿಲು ತೆಗೆಯುವುದಿಲ್ಲ ಎಂದು ಪಟ್ಟುಹಿಡಿದಿದ್ದಾನೆ. ಈ ಹಿನ್ನೆಲೆ ಸ್ಥಳಕ್ಕೆ ಮಾರ್ಕೆಟ್ ಪಿಎಸ್ಐ ವಿಠ್ಠಲ ಹಾವನ್ನವರ್ ಆಗಮಿಸಿ ಆತನನ್ನು ಮನವೊಲಿಸಿ ಬಾಗಿಲು ತೆಗೆಸಿದರು. ಆದ್ರೆ, ಆ ವ್ಯಕ್ತಿಯು ಕೈಯಲ್ಲಿ ಬಕೆಟ್ ಹಿಡಿದುಕೊಂಡು ಅದರ ತುಂಬ ಗಾಜಿನ ಪುಡಿಯನ್ನು ತುಂಬಿ ಶೌಚಾಲಯದಿಂದ ಹೊರಬಂದಿದ್ದಾನೆ.