ಬೆಂಗಳೂರು: ಇದೇ ತಿಂಗಳ 15ರಂದು ಮೈಸೂರಿನಲ್ಲಿ ವಿಷ್ಣು ಸ್ಮಾರಕಕ್ಕೆ ಭೂಮಿ ಪೂಜೆ ನೆರವೇರಲಿದೆ ಎಂದು ಭಾರತಿ ವಿಷ್ಣುವರ್ಧನ್ ತಿಳಿಸಿದ್ದಾರೆ.
ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಭಾರತಿ ವಿಷ್ಣುವರ್ಧನ್ ಹಾಗೂ ಅನಿರುದ್ಧ್ ಭೇಟಿ ಮಾಡಿ ವಿಷ್ಣು ಸ್ಮಾರಕ ನಿರ್ಮಾಣದ ಗುದ್ದಲಿ ಪೂಜೆ ನೆರೆವೇರಿಸುವಂತೆ ಮನವಿ ಮಾಡಿಕೊಂಡರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಭಾರತಿ, 11ನೇ ವರ್ಷದ ವಿಷ್ಣುವರ್ಧನ್ ಪುಣ್ಯ ಸ್ಮರಣೆಗೆ ಸಿಂಎಂ ಅವರನ್ನ ಕರೆಯಲು ಬಂದಿದ್ದೇವೆ. ಮೈಸೂರಿನಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಆಗುತ್ತಿದೆ. ಈ ತಿಂಗಳ 15ರಂದು ಸ್ಮಾರಕದ ಗುದ್ದಲಿ ಪೂಜೆ ಕಾರ್ಯಕ್ರಮವಿದೆ. ಸೂಕ್ತ ಭದ್ರತೆಗಾಗಿ ಮತ್ತು ಉದ್ಘಾಟನಾ ಕಾರ್ಯಕ್ರಮಕ್ಕಾಗಿ ಸಿಎಂಗೆ ಮನವಿ ಮಾಡಿದ್ದೇವೆ ಎಂದರು.
ಕೋವಿಡ್ ಇರೋ ಕಾರಣ ಸಿ.ಎಂ ಗುದ್ದಲಿಪೂಜೆಗೆ ಬರಲು ಆಗುತ್ತಿಲ್ಲ. ಹೀಗಾಗಿ ಅವರು ಆನ್ ಲೈನ್ ಮೂಲಕ ವಿಷ್ಣು ಸ್ಮಾರಕದ ಶಂಕುಸ್ಥಾಪನೆ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.
ಇದೇ ವೇಳೆ ಡ್ರಗ್ಸ್ ಮಾಫಿಯಾ ಬಗ್ಗೆ ಮಾತನಾಡಿದ ಅನಿರುದ್ಧ, ನಮಗೆ ಡ್ರಗ್ಸ್ ಮಾಫಿಯಾ, ಡ್ರಗ್ಸ್ ಜಾಲದ ಬಗ್ಗೆ ಅರಿವಿಲ್ಲ. ಈ ವಿಚಾರ ಮನಸ್ಸಿಗೆ ತುಂಬಾ ಬೇಜಾರಾಗುತ್ತಿದೆ. ಇಡೀ ಜಗತ್ತಿನಲ್ಲೇ ಈ ಮಾಫಿಯಾ ಇರಬಾರದು. ಯುವ ಪೀಳಿಗೆಯನ್ನ ಇದರಿಂದ ರಕ್ಷಿಸಬೇಕು ಎಂದು ಇದೇ ವೇಳೆ ಮನವಿ ಮಾಡಿಕೊಂಡರು.