ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರು(Anganwadi Workers) ರಾಜ್ಯ ಸರ್ಕಾರ ನೀಡುತ್ತಿರುವ ಸೀರೆಗಳನ್ನು ತಿರಸ್ಕರಿಸಿದ್ದಾರೆ. ಪ್ರಧಾನಮಂತ್ರಿಯವರ ಬಹುಮುಖ್ಯ ಕಾರ್ಯಕ್ರಮವಾದ ಪೋಷಣ್ ಅಭಿಯಾನದಡಿ (Poshan Campaign-National Nutrition Mission) ವಿತರಿಸಲು ಮುಂದಾಗಿರುವ ಸೀರೆಗಳನ್ನು ಅಂಗನವಾಡಿ ಕಾರ್ಯಕರ್ತೆಯರು ನಿರಾಕರಿಸಿದ್ದಾರೆ. ಈ ಸೀರೆಗಳು ಸರ್ಕಾರದ ಪ್ರಚಾರಕ್ಕೆ ಬಳಸುವ ಬ್ಯಾನರ್ನಂತಿವೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಹೀಗಾಗಿ ಸೀರೆ ಪಡೆಯಲು ಅಂಗನವಾಡಿ ಕಾರ್ಯಕರ್ತೆಯರು ಹಿಂದೇಟು ಹಾಕಿದ್ದಾರೆ.
ಸುಮಾರು 10 ಕೋಟಿ ಮೌಲ್ಯದ 2.5 ಲಕ್ಷಕ್ಕೂ ಹೆಚ್ಚು ಸೀರೆಗಳನ್ನು ರಾಜ್ಯದ ಗೋದಾಮಿನಲ್ಲಿ ಇರಿಸಲಾಗಿದೆ. ಮಕ್ಕಳು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಲ್ಲಿ ಪೌಷ್ಠಿಕಾಂಶದ ಅಂಶಗಳನ್ನು ಸುಧಾರಿಸಲು ರೂಪಿಸಲಾದ ‘ಪೋಷಣ್ ಅಭಿಯಾನ’ ಅನುಷ್ಠಾನದಲ್ಲಿ ಮುಂಚೂಣಿಯಲ್ಲಿರುವ ಒಂದು ಲಕ್ಷ ಅಂಗನವಾಡಿ ಕಾರ್ಯಕರ್ತೆಯರಿಗೆ ಈ ಸೀರೆಗಳನ್ನು ಸಮವಸ್ತ್ರವಾಗಿ ವಿತರಿಸಬೇಕಿತ್ತು. ಈ ಅಭಿಯಾನದ ಭಾಗವಾಗಿ, 62,580 ಕೇಂದ್ರಗಳು ಮತ್ತು 3,331 ಮಿನಿ ಅಂಗನವಾಡಿಗಳಲ್ಲಿನ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅವರ ಸಹಾಯಕಿಯರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ತಲಾ ಎರಡು ಸೀರೆಗಳನ್ನು ವಿತರಿಸಲು ಸರ್ಕಾರ ಟೆಂಡರ್ ಸಹ ಆಹ್ವಾನಿಸಿದೆ. ಆದರೆ ಇದೀಗ ಈ ಸೀರೆಗಳನ್ನು ಪಡೆಯಲು ಕಾರ್ಯಕರ್ತೆಯರು ಹಿಂದೇಟು ಹಾಕುತ್ತಿದ್ದಾರೆ.