ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿಯವರು ಮಾಧ್ಯಮಗಳ ಮೈಕ್ ಕಂಡರೆ ಎಕೆ-47 ಗನ್ ಕಂಡಂತೆ ಹೆದರುತ್ತಾರೆ’ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಗಂಗಾ ನದಿಯಲ್ಲಿ ಕೋವಿಡ್ ಮೃತದೇಹಗಳು ತೇಲಿದಾಗ, ಚೀನಾ ನಮ್ಮ ದೇಶದ 20 ಮಂದಿ ಯೋಧರನ್ನು ಹತ್ಯೆ ಮಾಡಿದಾಗ, ಪುಲ್ವಾಮ ದಾಳಿಯಲ್ಲಿ 40 ಯೋಧರು ಮಡಿದಾಗ ಬಾರದ ‘ಓಹ್ ಮೈ ಗಾಡ್’ ಉದ್ಘಾರ ಮಾಧ್ಯಮಗಳ ಮೈಕ್ ಎದುರಾದಾಗ ಬರುತ್ತದೆ ಎಂದರೆ ಅದೆಷ್ಟು ಗಾಬರಿಯಾಗಿರಬಹುದು’ ಎಂದು ಪ್ರಶ್ನಿಸಿದೆ.
‘ರಾಹುಲ್ ಗಾಂಧಿಯವರು ಆಹ್ವಾನದ ಮೇರೆಗೆ ಸ್ನೇಹಿತರ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದರೇ ಹೊರತು ಆಹ್ವಾನವಿಲ್ಲದಿದ್ದರೂ ಪಾಕಿಸ್ತಾನದ ಬಿರಿಯಾನಿ ತಿನ್ನಲು ಹೋಗಿರಲಿಲ್ಲ. ಪುಲ್ವಾಮ ದಾಳಿಯ ಸಂಗತಿ ತಿಳಿದರೂ ನಿರ್ಲಕ್ಷಿಸಿ ಶೂಟಿಂಗ್ನಲ್ಲಿ ನಿರತರಾಗಿದ್ದ ತಮ್ಮ ನಾಯಕನಿಗೆ (ಮೋದಿ) ಬಿಜೆಪಿಗರು ಮೊದಲು ಬುದ್ದಿ ಹೇಳಿಕೊಳ್ಳಲಿ’ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ರಾಹುಲ್ ಗಾಂಧಿಯವರು ಮದುವೆ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದು, ಜಗತ್ತಿನ ಅತಿ ದೊಡ್ಡ ಪ್ರಮಾದ ಎನ್ನುತ್ತಿರುವ ಬಿಜೆಪಿ ಉತ್ತರಿಸಲಿ. ಬಿಜೆಪಿ ನಾಯಕರಾದ ಪ್ರಕಾಶ್ ಜಾವಡೇಕರ್ ಅವರು ಇದೇನು ಗೋಮೂತ್ರ ಪ್ರೋಕ್ಷಣೆ ಮಾಡುತ್ತಿರುವುದೇ ಅಥವಾ ಪವಿತ್ರ ಗಂಗಾಜಲವನ್ನು ಬಾಟಲಿಯಲ್ಲಿ ತುಂಬಿಕೊಂಡು ಸಿಂಪಡಿಸುತ್ತಿರುವುದೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.