ಕಾರವಾರ: ಆ ದೇವರಿಗೆ ಸಿಗರೇಟು ಎಂದರೆ ಎಲ್ಲಿಲ್ಲದ ಪ್ರೀತಿ. ಹೆಂಡ ನೀಡಿದರೆ ಇಷ್ಟಾರ್ಥವನ್ನು ಏನಿದ್ದರೂ ನೆರವೇರಿಸುತ್ತಾನೆ ಎನ್ನುವ ನಂಬಿಕೆ ಭಕ್ತರದ್ದು.
ಹೌದು. ಕಾರವಾರ ನಗರದ ಕಾಳಿ ನದಿ ಸಂಗಮದಲ್ಲಿರುವ ಕಾಪ್ರಿ ದೇವರ ಜಾತ್ರಾ ಮಹೋತ್ಸವಕ್ಕೆ ತಮ್ಮ ಇಷ್ಟಾರ್ಥವನ್ನು ನೆರವೇರಿಸಿಕೊಂಡು ಹರಕೆ ತೀರಿಸಲು ಜನರು ಹೀಗೆ ನಿಂತಿದ್ದಾರೆ. ಪ್ರತಿ ವರ್ಷ ನಡೆಯುವ ಕಾಪ್ರಿ ದೇವರ ವಿಶಿಷ್ಟ ಜಾತ್ರೆಗೆ ಕಾರವಾರ ಮಾತ್ರವಲ್ಲದೇ ಮಹಾರಾಷ್ಟ್ರ, ಗೋವಾದಿಂದಲೂ ಜನರು ಆಗಮಿಸ್ತಾರೆ. ತಮ್ಮ, ತಮ್ಮವರ ಒಳಿತಿಗಾಗಿ ಹತ್ತು ಹಲವು ಹರಕೆ ಕಟ್ಟಿಕೊಳ್ಳುತ್ತಾರೆ. 500 ವರ್ಷದ ಹಿಂದೆ ನಿರ್ಮಾಣವಾದ ಈ ದೇವಸ್ಥಾನಕ್ಕೂ ವಿಶಿಷ್ಟ ಇತಿಹಾಸವಿದೆ. ಈಸ್ಟ್ ಇಂಡಿಯಾ ಕಂಪನಿ ಆಳ್ವಿಕೆ ಸಮಯದಲ್ಲಿ ಕಾಪ್ರಿ ಎಂಬ ವಿದೇಶಿಗ ಗುಲಾಮನಾಗಿ ಭಾರತಕ್ಕೆ ಬಂದಿದ್ದನಂತೆ. ಆತ ಬ್ರಿಟಿಷರು ಕೊಡ್ತಿದ್ದ ಎಲ್ಲ ರೀತಿಯ ಕಷ್ಟ, ತೊಂದರೆಗಳನ್ನು ಸಹಿಸಿಕೊಂಡಿದ್ದವನು.
ಬಳಿಕ ಕಾರವಾರ ಭಾಗದಲ್ಲಿ ಬಡವರಿಗೆ ಸಹಾಯ ಮಾಡುತ್ತಾ ಅವರ ಸಂಕಷ್ಟ ನಿವಾರಿಸುತಿದ್ದನಂತೆ. ಈತನಿಗೆ ಬೀಡಿ, ಸಿಗರೇಟು, ಕೋಳಿ, ಕುರಿ ಮಾಂಸ ಬಲುಪ್ರೀತಿ. ಹೀಗಾಗಿ ಈತನ ಬಳಿ ಸಂಕಷ್ಟ ತೋಡಿಕೊಂಡು ಬರುವವರು ಈತನಿಗೆ ಕಾಣಿಕೆಯಾಗಿ ಇವುಗಳನ್ನು ನೀಡುತ್ತಿದ್ದರು ಎಂಬ ಇತಿಹಾಸವಿದೆ.
ಒಟ್ಟಿನಲ್ಲಿ ಜಾತಿ, ಕುಲ, ಧರ್ಮ ಎಂದು ಹೊಡೆದಾಡಿಕೊಳ್ಳುತ್ತಿರುವವರ ಮಧ್ಯೆ ಒಬ್ಬ ವಿದೇಶಿ ಪ್ರಜೆ ಎಲ್ಲಾ ಧರ್ಮೀಯರನ್ನು ಸಮಾನವಾಗಿ ಕಂಡು ಅವರ ಸಂಕಷ್ಟಗಳಿಗೆ ಸ್ಪಂದಿಸಿ ಇದೀಗ ಅವನ ಕಾಲದ ನಂತರ ದೇವರ ರೂಪ ಪಡೆದು ಎಲ್ಲಾ ಧರ್ಮಿಯರಿಂದ ಪೂಜೆಗೆ ಒಳಗಾಗುತ್ತಿರುವುದು ನಮ್ಮ ದೇಶದ ಜ್ಯಾತ್ಯಾತೀತತೆಯನ್ನು ಮತ್ತೊಮ್ಮೆ ಸಾರುತ್ತಿದೆ.