ದೇವನಹಳ್ಳಿ(ಬೆಂಗಳೂರು): ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮುಂದುವರಿದಿದೆ. ಉಕ್ರೇನ್ನಲ್ಲಿ ಭಾರತೀಯರು ಸಿಲುಕಿಕೊಂಡಿದ್ದು, ಅಲ್ಲಿಂದ ಅವರನ್ನು ಮರಳಿ ದೇಶಕ್ಕೆ ಕರೆತರುವ ಕೆಲಸ ಆಗುತ್ತಿದೆ. ಅದರಂತೆ ಐವರು ವಿದ್ಯಾರ್ಥಿಗಳು ಉಕ್ರೇನ್ನಿಂದ ದೆಹಲಿಗೆ ಬಂದು, ಅಲ್ಲಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಿನ್ನೆ ರಾತ್ರಿ 8 ಗಂಟೆಗೆ ಆಗಮಿಸಿದ್ದಾರೆ.
ಸೋಮವಾರ ರಾತ್ರಿ 5 ವಿದ್ಯಾರ್ಥಿಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ವಿದ್ಯಾರ್ಥಿಗಳಾದ ಶ್ರವಣ ಸಂಗಣ್ಣ, ಶಕ್ತಿಶ್ರೀ ಶೇಖರ್, ಮೈನಾ ಅನಿಲ್ ನಾಯಕ್, ನಿಹಾರಿಕಾ, ಆಶಾ ವೆಂಕಟೇಶ್ ರೆಡ್ಡಿ ಅವರನ್ನು ಪೋಷಕರು ಬರಮಾಡಿಕೊಂಡರು.
ಉಕ್ರೇನ್ನಿಂದ ವಾಪಸ್ ಬಂದ ವಿದ್ಯಾರ್ಥಿಗಳು ಮಾತನಾಡಿ, ವೆಸ್ಟ್ರನ್ ಉಕ್ರೇನ್ನಲ್ಲಿ ಅಷ್ಟೊಂದು ಸಮಸ್ಯೆ ಇರಲಿಲ್ಲ. ಆದ್ರೆ ಗಡಿಗೆ ಬರುವಾಗ ಕೊಂಚ ಸಮಸ್ಯೆಯಾಯಿತು. ನಮ್ಮನ್ನು ಸುರಕ್ಷಿತವಾಗಿ ಕರೆತಂದಿದ್ದಾರೆ ಎಂದು ಪ್ರಧಾನಿ ಮೋದಿ, ಕರ್ನಾಟಕ ಸರ್ಕಾರ, ಭಾರತ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದರು.