ಕೋವಿಡ್ ಮಹಾಮಾರಿಯಿಂದಾಗಿ ಕಳೆದೆರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಪ್ರೊ ಕಬಡ್ಡಿ ಲೀಗ್ ಮತ್ತೆ ಬಂದಿದೆ. ವಿಶೇಷವಾಗಿ ಈ ಬಾರಿ ಸಂಪೂರ್ಣ ಲೀಗ್ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೇ ನಡೆಯುತ್ತಿದೆ. ಡಿಸೆಂಬರ್ 22ರಿಂದ ಬಯೋಬಬಲ್ ವ್ಯಾಪ್ತಿಯಲ್ಲಿ ಒಂದೇ ಹೋಟೆಲ್ನಲ್ಲಿ ಲೀಗ್ ಆಯೋಜಿಸಲಾಗುತ್ತಿದ್ದು, ಕೆಲ ದಿನಗಳಲ್ಲಿ 3 ಪಂದ್ಯಗಳೂ ನಡೆಯಲಿದ್ದು, ಕಬಡ್ಡಿ ಪ್ರಿಯರನ್ನು ರಂಜಿಸಲು ವೇದಿಕೆ ಸಜ್ಜಾಗಿದೆ.
ಪ್ರೊ ಕಬಡ್ಡಿ ಲೀಗ್ನ ಆರಂಭಿಕ ದಿನಗಳಿಂದಲೂ ಕನ್ನಡಿಗರು ಪ್ರಾಬಲ್ಯ ಸಾಧಿಸುತ್ತಾ ಬಂದಿದ್ದಾರೆ. ಹರಿಯಾಣ, ಮಹಾರಾಷ್ಟ್ರ ಬಳಿಕ ಕರ್ನಾಟಕದಿಂದ ಅತಿ ಹೆಚ್ಚು ಆಟಗಾರರು ಲೀಗ್ನಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಬಾರಿಯೂ ಲೀಗ್ನಲ್ಲಿ ಆಡುತ್ತಿರುವ ಕನ್ನಡಿಗರ ಸಂಖ್ಯೆ ಒಂದು ಡಜನ್ ದಾಟಿದೆ. 12 ತಂಡಗಳ ಪೈಕಿ 8 ತಂಡಗಳಲ್ಲಿ ಕರ್ನಾಟಕ ಮೂಲದ ಆಟಗಾರರು ಕಣಕ್ಕಿಳಿಯಲಿದ್ದು, ಈ ಪೈಕಿ ತವರು ನೆಲ ಬೆಂಗಳೂರು ಬುಲ್ಸ್ನಲ್ಲೇ ಕನ್ನಡಿಗರು ಇಲ್ಲದೆ ಇರುವುದು ವಿಪರ್ಯಾಸವೆನಿಸಿದೆ.
ಈ ಬಾರಿಯ ಲೀಗ್ನಲ್ಲಿ 13 ಆಟಗಾರರು ಕಣಕ್ಕಿಳಿಯುತ್ತಿದ್ದು 8 ತಂಡಗಳ ಪರ ಆಡಲಿದ್ದಾರೆ. ಈ ಪೈಕಿ ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ ತಂಡದ ಪರ ಅತಿ ಹೆಚ್ಚು ಅಂದರೆ ಆರು ಆಟಗಾರರು ಕಣಕ್ಕಿಳಿಯುತ್ತಿರುವುದು ವಿಶೇಷ. ಬೆಂಗಾಲ್ ವಾರಿಯರ್ಸ್ ತಂಡದ ಕೋಚ್ ಕೂಡ (ಬಿಸಿ ರಮೇಶ್) ಕನ್ನಡಿಗರೇ ಆಗಿದ್ದಾರೆ. ಇನ್ನು ಯು ಮುಂಬಾ (ರಾಜಗುರು) ಮತ್ತು ಪುಣೇರಿ ಪಲ್ಟಾನ್ (ರವಿಶೆಟ್ಟಿ) ಕೋಚ್ಗಳೂ ಕನ್ನಡಿಗರಾಗಿದ್ದಾರೆ.
*ಬುಲ್ಸ್ನಲ್ಲಿಲ್ಲ ಕನ್ನಡಿಗರು!
ಬೆಂಗಳೂರು ಫ್ರಾಂಚೈಸಿ ಬೆಂಗಳೂರು ಬುಲ್ಸ್ ತಂಡದಲ್ಲಿ ಕನ್ನಡಿಗರೇ ಇಲ್ಲದಿರುವುದು ವಿಪರ್ಯಾಸ. ವಿನೋದ್ ಎಂಬ ಆಟಗಾರ ಬುಲ್ಸ್ ತಂಡದಲ್ಲಿದ್ದರೂ ತರಬೇತಿ ವೇಳೆ ಗಾಯಗೊಂಡ ಹಿನ್ನೆಲೆಯಲ್ಲಿ ಟೂರ್ನಿಯಿಂದ ಹೊರಬಿದ್ದಿದ್ದಾರೆ ಎಂದು ವರದಿಯಾಗಿದೆ.
*ಬೆಂಗಾಲ್ನಲ್ಲಿ ಆರು ಮಂದಿ ಆಟ
ಕನ್ನಡಿಗ ಬಿಸಿ ರಮೇಶ್ ತರಬೇತುದಾರರಾಗಿರುವ ಬೆಂಗಾಲ್ ವಾರಿಯರ್ಸ್ ತಂಡದಲ್ಲಿ ಕರ್ನಾಟಕದ ಆರು ಆಟಗಾರರಿದ್ದಾರೆ. ಅನುಭವಿ ರೈಡರ್ ಸುಖೇಶ್ ಹೆಗ್ಡೆ, ಜೆ.ದರ್ಶನ್, ಸಚಿನ್ ಸುವರ್ಣ (ಸಚಿನ್ ವಿಟ್ಲ), ಮನೋಜ್ ಗೌಡ, ಆನಂದ್ ವಿ. ಇದ್ದಾರೆ. ಅಲ್ಲದೆ, ಮುಂಬೈನಲ್ಲಿ ನೆಲೆಸಿರುವ ಕರ್ನಾಟಕ ಮೂಲದ ಆಟಗಾರ ರಿಷಾಂಕ್ ದೇವಾಡಿಗ ಈ ಬಾರಿ ಬೆಂಗಾಲ್ ತಂಡದಲ್ಲಿದ್ದಾರೆ. ಈ ಪೈಕಿ ಸುಖೇಶ್, ರಿಷಾಂಕ್, ಆನಂದ್ ರೈಡರ್ಗಳಾದರೆ, ದರ್ಶನ್, ಸಚಿನ್ ರಕ್ಷಣಾ ವಿಭಾಗದಲ್ಲಿ ಆಡಲಿದ್ದಾರೆ. ಮನೋಜ್ ಗೌಡ ಆಲ್ರೌಂಡರ್ ಆಗಿದ್ದಾರೆ.