ಬೆಳಗಾವಿಯ ಸಾಹಿತ್ಯ ಕ್ಷೇತ್ರದ ಹಿರಿಯ ಕೊಂಡಿಯೊಂದು ಕಳಚಿದೆ. ಖ್ಯಾತ ಸಾಹಿತಿಗಳು ಹಾಗೂ ಜಾನಪದ ಸಂಶೋಧಕರು ಆಗಿದ್ದ ಪ್ರೊ.ಜ್ಯೋತಿ ಹೊಸೂರ ಅವರು ಇಂದು ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ಪ್ರೊ.ಜ್ಯೋತಿ ಹೊಸೂರ ಅವರು ಜಾನಪದ ಕ್ಷೇತ್ರದಲ್ಲಿ ಬಹು ದೊಡ್ಡ ಹೆಸರು ಮಾಡಿದ ಸಾಹಿತಿ. ಗಾದೆ, ಒಡಪು, ಗ್ರಾಮದೇವತೆ ಅವರು ಮಾಡಿದ ಸಂಶೋಧನೆಗಳು, ವಿದ್ವತ ಪ್ರಪಂಚದಲ್ಲಿ ಗೌರವ ಆದರಕ್ಕೆ ಪಾತ್ರವಾಗಿದ್ದವು. ರಾಯಬಾಗದಂತಹ ಸಣ್ಣ ಹಳ್ಳಿಯಲ್ಲಿದ್ದರು. ಅವರು ನಡೆಸಿದ ಸಂಶೋಧನೆಗಳು ವಿಶ್ವವಿದ್ಯಾಲಯ ಮಟ್ಟದಲ್ಲಿ ಚರ್ಚೆ ಆಗುವಂತವು.
ಶಂಭಾ ಜೋಶಿಯವರ ಸಂಶೋಧನೆಯ ಬಗ್ಗೆ ವಿಶೇಷ ಅಧ್ಯಯನ ಮಾಡಿದ ಜ್ಯೋತಿ ಹೊಸೂರ ಅವರು ಕಾಲಗತಿ ಪ್ರಕಾಶನ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಆ ಮೂಲಕ ಶಂಬಾ ಜೋಶಿಯವರ ಸಮಗ್ರ ಸಾಹಿತ್ಯವನ್ನು ಪ್ರಕಟಿಸಿದ್ದರು. ಸಂಗೊಳ್ಳಿ ರಾಯಣ್ಣಾ, ಕಿತ್ತೂರು ಚನ್ನಮ್ಮ, ಕನಕದಾಸ, ವಚನ ಸಾಹಿತ್ಯ ಕುರಿತು ಮಹತ್ವದ ಕೃತಿಗಳನ್ನು ಪ್ರಕಟಿಸಿದ್ದಾರೆ.
ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕನಕಶ್ರೀ ಪ್ರಶಸ್ತಿ, ಬೆಟಗೇರಿ ಕೃಷ್ಣಶರ್ಮ ಸಂಶೋಧಕ ಪ್ರಶಸ್ತಿ ಮತ್ತು ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅವರು ಪತ್ನಿ, ಮಗ ಹಾಗೂ ಮಗಳನ್ನು ಅಗಲಿದ್ದಾರೆ. ಹಾಗೂ ಕೆ.ಎಲ್.ಇ.ಆಸ್ಪತೆಗೆ ದೇಹದಾನ ಮಾಡುವ ಮೂಲಕ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ.
ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ.ಸರಜೂ ಕಾಟ್ಕರ್, ಬೆಳಗಾವಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಮಂಗಲಾ ಮೆಟಗುಡ್ಡ, ಮೋಹನ ಪಾಟೀಲ, ಬಿ.ಎ.ಸನದಿ, ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷ ಡಾ.ರಾಮಕೃಷ್ಣ ಮರಾಠೆ ಹಾಗೂ ಪದಾಧಿಕಾರಿಗಳಾದ ಎಂವೈ ಮೆನಸಿನಕಾಯಿ, ಸಿಎಂ ಬೂದಿಹಾಳ, ಎ.ಎ.ಸನದಿ, ಬಿ.ಎಫ್.ಕಲ್ಲನ್ನವರ, ಡಾ.ಎ.ಎಲ್.ಪಾಟೀಲ, ಡಾ.ಬಿ.ಜೆ.ಧಾರವಾಡ ಸೇರಿದಂತೆ ಇನ್ನಿತರರು ಅಗಲಿದ ಪ್ರೋ.ಜ್ಯೋತಿ ಹೊಸುರ ಅವರ ಅಂತಿಮ ದರ್ಶನ ಪಡೆದುಕೊಂಡರು.