ಭಾರೀ ಮಳೆಯಿಂದಾಗಿ ಕುಸಿಯುತ್ತಿದ್ದ 4 ಅಂತಸ್ತಿನ ಮನೆಯನ್ನು ಬಿಬಿಎಂಪಿ ಅಧಿಕಾರಿಗಳೇ ಸ್ವತಃ ಧರೆಗುರುಳಿಸಿದ ಘಟನೆ ಬೆಂಗಳೂರಿನ ಕಮಲಾನಗರದ ವೃಷಭಾವತಿ ವಾರ್ಡ್ ನಲ್ಲಿ ನಡೆದಿದೆ.
ಮಹಾಲಕ್ಷ್ಮಿಪುರಂ ವಿಧಾನಸಭಾ ಕ್ಷೇತ್ರದ ವೃಷಭವತಿ ವಾರ್ಡ್ ನ ಎನ್ ಜಿ.ಓ ಬಡಾವಣೆಯಲ್ಲಿ ರಾತ್ರಿಯಿಂದಲೇ ಮಮನೆಯ ತಳಭಾಗ ಕುಸಿಯಲು ಆರಂಭಿಸಿತ್ತು.
ಮನೆ ಕುಸಿಯುತ್ತಿದ್ದಂತೆ ಮನೆಯಲ್ಲಿದ್ದವರನ್ನು ಸುರಕ್ಷಿತವಾಗಿ ಹೊರಗೆ ಕರೆಸಿ ಯಾವುದೇ ಪ್ರಾಣಹಾನಿ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು.
ಬೆಂಗಳೂರಿನಲ್ಲಿ ಸತತವಾಗಿ ಮನೆ ಕುಸಿತ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದ್ದು, ಕಟ್ಟಡ ಉರುಳಿಸಲು ಆದೇಶ ನೀಡಿದರು.
15 ರಿಂದ 20 ವರ್ಷದ ಹಿಂದಿನ ಈ ಕಟ್ಟಡವನ್ನು15 ಅಡಿ ಅಗಲ ಮತ್ತು 20 ಅಡಿ ಉದ್ದದ ಜಾಗದಲ್ಲಿ ನಿರ್ಮಿಸಲಾಗಿತ್ತು. ಎರಡು ಕುಟುಂಬಗಳು ವಾಸಿಸುತ್ತಿದ್ದವು.
ಇಂದು ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿದ ಸಚಿವ ಗೋಪಾಲಯ್ಯ ಸುದ್ದಿಗಾರರೊಂದಿಗೆ ಮಾತನಾಡಿ, ಇದು ಬಿಬಿಎಂಪಿ ಸರ್ವೆ ಮಾಡಿರುವ ಶಿಥಿಲಗೊಂಡ ಕಟ್ಟಡಗಳ ಪಟ್ಟಿಯಲ್ಲಿದೆ. ಎಂಟು ಮನೆಗಳನ್ನು ಈಗಾಗಲೇ ಶಿಫ್ಟ್ ಮಾಡಿದ್ದೇವೆ ಎಂದು ತಿಳಿಸಿದರು.