ಹಾವೇರಿ: ಪೊಲೀಸ್ ಅಧಿಕಾರಿಗಳ ಮುಂದೆಯೇ ವಿಷ ಸೇವಿಸಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾವೇರಿಯಲ್ಲಿ ನಡೆದಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಸ್ವಕ್ಷೇತ್ರ ಶಿಗ್ಗಾವಿ ತಾಲೂಕು ಗಡಿ ಭಾಗದ ತರ್ಲಘಟ್ಟ ಗ್ರಾಮದಲ್ಲಿ ರೈತ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ರೈತರು ಭೂಮಿಯಲ್ಲಿ ಸಾಗುವಳಿ ಮಾಡಲು ಮುಂದಾದ ವಿಷಯ ತಿಳಿದು ದುಂಡಸಿ ಅರಣ್ಯ ಇಲಾಖೆಯ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿದ್ದರು. ತಡಸ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕೂಡ ಸ್ಥಳಕ್ಕೆ ಹೋಗಿ ಮನವಿ ಮಾಡಿದರು.
ಇದು ಅರಣ್ಯ ಇಲಾಖೆಯ ಸ್ಥಳ. ಯಾರು ಅತಿಕ್ರಮಣ ಮಾಡಲು ಅವಕಾಶವಿಲ್ಲ. ಈ ಸ್ಥಳವನ್ನು ಅರಣ್ಯ ಇಲಾಖೆಯ ಕಾಯ್ದಿಟ್ಟ ಸ್ಥಳ ಎಂದು ಕಾಯ್ದಿರಿಸಲಾಗಿದೆ. ಹೀಗಾಗಿ ಕೃಷಿ ಮಾಡುವಂತಿಲ್ಲ ಎಂದು ಇಬ್ಬರು ರೈತರಿಗೆ ಹೇಳಿದ್ದಾರೆ ಎನ್ನಲಾಗಿದೆ.
ಇನ್ನು, ಕೂಡಲೇ ಸ್ಥಳದಲ್ಲಿದ್ದ ರೈತರು ಇದನ್ನು ವಿಡಿಯೋ ಮಾಡಲು ಮುಂದಾಗಿದ್ದಾರೆ. ಈ ವೇಳೆ ಅರಣ್ಯ ಇಲಾಖೆ ಅಧಿಕಾರಿ ವಿಡಿಯೋ ಮಾಡಬೇಡಿ, ನಾವೇ ಮಾಡುತ್ತೇವೆ ಎಂದಿದ್ದಾರೆ. ಆಗ ಮತ್ತೆ ರೈತ ಮಹಿಳೆ ವಿಡಿಯೋ ಮಾಡಲು ಮುಂದಾಗಿದ್ದು, ಅಧಿಕಾರಿ ಮೊಬೈಲ್ ಕಸಿದುಕೊಂಡಿದ್ದಾರೆ. ಇದರಿಂದ ಬೇಸತ್ತ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಮಹಿಳೆ ಅಸ್ವಸ್ಥರಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.