ಅ.11: ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ಜನ ಮೃತಪಟ್ಟರು. ಅದರ ಬಗ್ಗೆ ಬಿಜೆಪಿ ಧ್ವನಿ ಎತ್ತಲಿಲ್ಲ. ರೈತರ ಹತ್ಯೆಯಾಗಿದೆ, ಆಗಲೂ ಧ್ವನಿಯೆತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿಯಿಂದ ರೈತರಿಗೂ ನ್ಯಾಯ ಸಿಗಲ್ಲ. ಸಾಮಾನ್ಯ ಜನರಿಗೂ ನ್ಯಾಯ ಸಿಗಲ್ಲ. ಹಾಗಾಗಿ ಅವರು ತಮ್ಮ ಹೆಸರನ್ನು ಮೌನೇಂದ್ರ ಮೋದಿ ಅಂತ ಬದಲಾಯಿಸಿಕೊಂಡರೆ ಒಳ್ಳೆಯದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಕಿಡಿಗಾರಿದರು.
ಸೋಮವಾರ ನಗರದ ರೇಸ್ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದ ಆವರಣದಲ್ಲಿ ರೈತ ವಿರೋಧಿ ಕೃಷಿ ಕಾನೂನುಗಳು ಮತ್ತು ಬಿಜೆಪಿ ದುರಾಡಳಿತಕ್ಕೆ ಬಲಿಯಾದ ರೈತರ ಸ್ಮರಣಾರ್ಥ ಆಯೋಜಿಸಲಾಗಿದ್ದ ಮೌನ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಉತ್ತರ ಪ್ರದೇಶದ ಲಖಿಂಪುರದಲ್ಲಿ ನಡೆದ ಘಟನೆ ಅಮಾನವೀಯವಾದದ್ದು. ಕೇಂದ್ರದ ಗೃಹ ಖಾತೆಯ ರಾಜ್ಯ ಮಂತ್ರಿಯ ಮಗ ರೈತರ ಮೇಲೆ ವಾಹನ ಹರಿಸಿ ಹಾಡುಹಗಲೇ ಹತ್ಯೆ ಮಾಡಿದ್ದಾರೆ. ಆದರೆ ಕೊಲೆಗಡುಕರನ್ನು ಬಿಜೆಪಿ ಸರಕಾರ ಮನೆಯ ಅತಿಥಿಗಳಂತೆ ನೋಡಿಕೊಳ್ಳುತ್ತಿದೆ. ಆರೋಪಿಗಳು ಶರಣಾಗುವವರೆಗೆ ಬಂಧಿಸುವ ಧೈರ್ಯತೋರಿಲ್ಲ. ಈ ದೇಶ ಯಾವ ಕಡೆಗೆ ಸಾಗುತ್ತಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.