ಬೆಳಗಾವಿ: ಕೊರೊನಾ ಶಂಕಿತ ವ್ಯಕ್ತಿ ಮನೆಯಲ್ಲಿಯೇ ಮೃತಪಟ್ಟಿದ್ದು, ಅಂತ್ಯಕ್ರಿಯೆ ಸಹಾಯಕ್ಕೆ ಯಾರೂ ಬರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಸೈಕಲ್ ಮೇಲೆ ಶವ ಸಾಗಿಸಿ ಅಂತಿಮಸಂಸ್ಕಾರ ಮಾಡಿದ ಮನಕಲಕುವ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯಲ್ಲಿ ಭಾನುವಾರ ಮ್ಯಧ್ಯಾಹ್ನ ನಡೆದಿದೆ.
ಎಂ.ಕೆ.ಹುಬ್ಬಳ್ಳಿಯ ಗಾಂಧಿ ನಗರದಲ್ಲಿ ಈ ಘಟನೆ ನಡೆದಿದೆ. ಕಳೆದ ಎರಡು ದಿನದಿಂದ ವಿಪರೀತ ಜ್ವರದಿಂದ ಬಳಲುತ್ತಿದ್ದ ವ್ಯಕ್ತಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊರೊನಾ ಲಕ್ಷಣಗಳಿದ್ದ ಹಿನ್ನೆಲೆಯಲ್ಲಿ ಬೆಳಗಾವಿ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದರು. ಆದ್ರೆ ಬೆಳಗಾಗುವಷ್ಟರಲ್ಲಿ ವ್ಯಕ್ತಿ ಮೃತಪಟ್ಟಿದ್ದಾನೆ.
ಕೊರೊನಾ ಶಂಕೆ ಹಿನ್ನೆಲೆ ಮೃತನ ಅಂತ್ಯಕ್ರಿಯೆಗೆ ಸಹಾಯ ಮಾಡಲು ಸ್ಥಳೀಯರು ಹಿಂದೇಟು ಹಾಕಿದ್ದಾರೆ. ಕುಟುಂಬಸ್ಥರು ಆರೋಗ್ಯಇಲಾಖೆಗೆ ಫೋನ್ ಮಾಡಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ರು ನಿರ್ಲಕ್ಷ್ಯ ವಹಿಸಲಾಗಿದೆ.
ಮೃತ ವ್ಯಕ್ತಿಯ ಕುಟುಂಬದ ಇಬ್ಬರು ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ, ಸೈಕಲ್ ಮೇಲೆ ಮಳೆಯಲ್ಲಿಯೇ ತೆಗೆದುಕೊಂಡು ಹೋಗುತ್ತಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.