Breaking News

ನಕಲಿ ಆದಾಯ ಪ್ರಮಾಣಪತ್ರ ಸಲ್ಲಿಕೆ – KPSC ಅಧ್ಯಕ್ಷರ ಪುತ್ರಿ ವಿರುದ್ಧ ಎಫ್‌ಐಆರ್

Spread the love

ಬೆಂಗಳೂರು: ಕರ್ನಾಟಕ ಲೋಕ ಸೇವಾ ಆಯೋಗದ  ಅಧ್ಯಕ್ಷ ಶಿವಶಂಕರ್ ಸಾಹುಕಾರ್ ಅವರ ಪುತ್ರಿ ಸುಮಾ ವಿರುದ್ಧ ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.

ಸರ್ಕಾರಿ ಹುದ್ದೆ ಪಡೆಯಲು ತಂದೆಯ ಪ್ರಭಾವ ಬಳಸಿ ಅತ್ಯಂತ ಕಡಿಮೆ ಆದಾಯದ ನಕಲಿ ಪ್ರಮಾಣಪತ್ರ ಸಲ್ಲಿಸಿದ ಗಂಭೀರ ಆರೋಪ ಇವರ ಮೇಲಿದ್ದು, ಕೆಪಿಎಸ್‌ಸಿ ಕಾರ್ಯದರ್ಶಿ ಶೋಭಾ ಅವರ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್  ದಾಖಲಿಸಿಕೊಂಡಿದ್ದಾರೆ.

ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಕೈಗಾರಿಕಾ ವಿಸ್ತರಣಾಧಿಕಾರಿ  ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಕೆಪಿಎಸ್‌ಸಿ ಅಧ್ಯಕ್ಷರ ಮಗಳು ಸುಮಾ ಅರ್ಜಿ ಸಲ್ಲಿಸಿ ಪರೀಕ್ಷೆ ಬರೆದಿದ್ದರು. ಹಿಂದುಳಿದ ವರ್ಗಗಳ ಮೀಸಲಾತಿ ಅಥವಾ ಶುಲ್ಕ ವಿನಾಯಿತಿ ಪಡೆಯುವ ದುರುದ್ದೇಶದಿಂದ ಅವರು ತಮ್ಮ ವಾರ್ಷಿಕ ಆದಾಯ ಕೇವಲ 40,000 ರೂ. ಎಂದು ನಮೂದಾಗಿದ್ದ ಆದಾಯ ಪ್ರಮಾಣಪತ್ರವನ್ನು ಸಲ್ಲಿಸಿದ್ದರು.

ಸುಮಾ ಅವರ ತಂದೆ ಶಿವಶಂಕರ್ ಸಾಹುಕಾರ್ ಅವರು ಈ ಹಿಂದೆ ಲೋಕಸೇವಾ ಆಯೋಗದ ಸದಸ್ಯರಾಗಿದ್ದಾಗಲೇ ತಿಂಗಳಿಗೆ 2 ಲಕ್ಷ ರೂ. ಅಧಿಕ ಸಂಬಳ ಪಡೆಯುತ್ತಿದ್ದರು. ಪ್ರಸ್ತುತ ಅವರು ಕೆಪಿಎಸ್‌ಸಿ ಅಧ್ಯಕ್ಷರಾಗಿದ್ದು, ಮತ್ತಷ್ಟು ಹೆಚ್ಚಿನ ವೇತನ ಮತ್ತು ಸೌಲಭ್ಯಗಳನ್ನು ಹೊಂದಿದ್ದಾರೆ. ಇಷ್ಟೊಂದು ಭಾರೀ ಆದಾಯ ಹೊಂದಿದ್ದರೂ, ಸರ್ಕಾರದ ಅತ್ಯುನ್ನತ ಹುದ್ದೆಯಲ್ಲಿದ್ದವರ ಮಗಳು ಬಡತನ ರೇಖೆಗಿಂತ ಕೆಳಗಿರುವವರಂತೆ ನಕಲಿ ದಾಖಲೆ ಸೃಷ್ಟಿಸಿದ್ದು ತನಿಖೆಯಲ್ಲಿ ಬಹಿರಂಗಗೊಂಡಿದೆ.

ಹಗರಣದ ಟೈಮ್‌ಲೈನ್‌
ಮೇ 12, 2025 – ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗಳಿಗಾಗಿ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ನಡೆದಿತ್ತು.
ಜುಲೈ 13, 2025 – ಹುದ್ದೆಯ ಮುಖ್ಯ ಸ್ಪರ್ಧಾತ್ಮಕ ಪರೀಕ್ಷೆ ಜರುಗಿತ್ತು. ಇದರಲ್ಲಿ ಸುಮಾ ಉತ್ತೀರ್ಣರಾಗಿದ್ದರು.
ಜನವರಿ 21, 2026 – ಕೆಪಿಎಸ್‌ಸಿ ವತಿಯಿಂದ ತಾತ್ಕಾಲಿಕ ಅರ್ಹತಾ ಪಟ್ಟಿಯನ್ನು ಪ್ರಕಟಿಸಲಾಯಿತು.
ಫೆಬ್ರವರಿ 19, 2026 – ಅರ್ಹತೆ ಪಡೆದ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ  ನಡೆಸಲಾಯಿತು. ಈ ಸಂದರ್ಭದಲ್ಲಿ ಕೆಪಿಎಸ್‌ಸಿ ಅಧಿಕಾರಿಗಳು ಸುಮಾ ಅವರ ಆದಾಯ ಪ್ರಮಾಣಪತ್ರವನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಅದು ನಕಲಿ ಎಂಬ ಮಹಾ ವಂಚನೆ ಬೆಳಕಿಗೆ ಬಂದಿದೆ.

ಪ್ರಮಾಣಪತ್ರ ಕೊಟ್ಟಿದ್ದು ಯಾರು?
ಈ ನಕಲಿ ಪ್ರಮಾಣಪತ್ರ ಸೃಷ್ಟಿಯ ಹಿಂದೆ ಕಂದಾಯ ಇಲಾಖೆಯ ದೊಡ್ಡ ಜಾಲವೇ ಕೆಲಸ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕೆಪಿಎಸ್‌ಸಿ ಅಧ್ಯಕ್ಷರ ಮಗಳಿಗೆ ಇಷ್ಟೊಂದು ಕಡಿಮೆ ಆದಾಯದ ಪತ್ರ ಮಾಡಿಕೊಟ್ಟ ಗ್ರಾಮ ಲೆಕ್ಕಾಧಿಕಾರಿ, ರೆವಿನ್ಯೂ ಇನ್ಸ್‌ಪೆಕ್ಟರ್ ಮತ್ತು ತಹಶೀಲ್ದಾರ್ ಅವರ ಕೈವಾಡದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮತ್ತೊಂದೆಡೆ, ಪುತ್ರಿಗೆ ಅಡ್ಡದಾರಿಯಲ್ಲಿ ಉದ್ಯೋಗ ಕೊಡಿಸಲು ಸ್ವತಃ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರ್ ಸಾಹುಕಾರ್ ಅವರೇ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆಯೇ? ಎಂಬ ಪ್ರಶ್ನೆ ಎದ್ದಿದೆ. ಈ ಪ್ರಕರಣದಲ್ಲಿ ಕೇವಲ ಪುತ್ರಿ ಮಾತ್ರವಲ್ಲದೆ ಅಧ್ಯಕ್ಷರ ಮೇಲೂ ಕಾನೂನು ಕ್ರಮ ಜರುಗುವ ಸಾಧ್ಯತೆ ದಟ್ಟವಾಗಿದೆ.

ಉದ್ಯೋಗಾಕಾಂಕ್ಷಿಗಳ ಆಕ್ರೋಶ:
ಹಗಲು ರಾತ್ರಿ ಕಷ್ಟಪಟ್ಟು, ಸಾಲ ಸೋಲ ಮಾಡಿ ಓದಿ ಪರೀಕ್ಷೆ ಬರೆಯುವ ಬಡ ಮತ್ತು ಅರ್ಹ ಅಭ್ಯರ್ಥಿಗಳಿಗೆ ಇಂತಹ ಪ್ರಭಾವಿಗಳ ಅಡ್ಡದಾರಿ ರಾಜಕಾರಣದಿಂದ ಭಾರಿ ಅನ್ಯಾಯವಾಗುತ್ತಿದೆ. ನಕಲಿ ದಾಖಲೆ ಸೃಷ್ಟಿಸಿದ ಅಧ್ಯಕ್ಷರ ಪುತ್ರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.


Spread the love

About Laxminews 24x7

Check Also

ತನ್ನ ಪರ ತೀರ್ಪು ಕೊಡಲಿ ಅಂತ ಮಹಿಳಾ ನ್ಯಾಯಾಧೀಶರ ಚೇರ್‌ಗೆ ಮಾಟಮಂತ್ರ – ಮಹಿಳೆ ಬಂಧನ

Spread the loveಚಿಕ್ಕಬಳ್ಳಾಪುರ: ಮಹಿಳಾ ನ್ಯಾಯಾಧೀಶರ ಚೇರ್‌ಗೆ ಮಹಿಳೆಯೊಬ್ಬರು ಮಾಟಮಂತ್ರ ಮಾಡಿರುವ ಅಚ್ಚರಿಯ ಘಟನೆ ಚಿಕ್ಕಬಳ್ಳಾಪುರ  ನ್ಯಾಯಾಲಯದಲ್ಲಿ ನಡೆದಿದೆ. ಸಿವಿಲ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ