ಕಲಬುರಗಿ: ಹಳೆ ವೈಷಮ್ಯ, ಪ್ರೀತಿ, ಆಸ್ತಿ ಸೇರಿದಂತೆ ನಾನಾ ಕಾರಣಗಳಿಗಾಗಿ ಕೊಲೆ ಪ್ರಕರಣಗಳು ನಡೆಯೋದು ಸದ್ಯ ಸಾಮಾನ್ಯ ಸಂಗತಿಯಾಗಿದೆ. ಆದರೆ ಇಂದು ಕಲಬುರಗಿಯಲ್ಲಿ ಬೀದಿ ನಾಯಿ ಕುರಿತಂತೆ ಶುರುವಾದ ಜಗಳದ ಯುವಕನೋರ್ವನ ಬರ್ಬರ ಕೊಲೆಯಲ್ಲಿ ಅಂತ್ಯವಾಗಿದೆ.
ಗುರುರಾಜ್ ಕುಲ್ಕರ್ಣಿ (35) ಕೊಲೆಯಾದ ವ್ಯಕ್ತಿ. ಕಲಬುರಗಿ ನಗರದ ಹೈಕೋರ್ಟ್ ಮುಂಭಾಗದ ಅಕ್ಕಮಹಾದೇವಿ ಕಾಲೋನಿ ನಿವಾಸಿಯಾಗಿರುವ ಗುರುರಾಜ್ ಕುಲ್ಕರ್ಣಿ, ತಾನಾಯಿತು ತನ್ನ ಕೆಲಸದ ಜೊತೆ ಜೊತೆಗೆ ಸಮಾಜ ಸೇವೆ ಮಾಡುತ್ತಿದ್ದರು. ಗುರುರಾಜ್ ಕುಲ್ಕರ್ಣಿ ಸಹೋದರಿ ಮನೆ ಹತ್ತಿರ ಬೀದಿ ನಾಯಿಯೊಂದು ಮಾಂಸದ ತುಂಡು ಹಿಡಿದುಕೊಂಡು ಬಂದಿತ್ತಂತೆ. ಈ ವೇಳೆ ಮಗಳು ಮನೆ ಹತ್ರ ಬಂದಿದ್ದ ನಾಯಿಗೆ ಬಿಸ್ಕೆಟ್ ಚಪಾತಿ ಹಾಕುತ್ತಿದ್ದಳು. ಆ ವೇಳೆ ಪಕ್ಕದ ಮನೆಯ ಪವನ್ ಜಾಗಿರ್ದಾರ್ ಎಂಬಾತ ನಾಯಿಗೆ ಕಲ್ಲಿನಿಂದ ಹೊಡೆದಿದ್ದಾನೆ. ಆದರೆ ಕಲ್ಲು ಮಿಸ್ ಆಗಿ ಗುರುರಾಜ್ ಕುಲ್ಕರ್ಣಿ ಸಹೋದರಿಗೆ ಬಡಿದಿದೆ. ಇದೇ ವಿಚಾರಕ್ಕೆ ಗುರುರಾಜ್ ಕುಲ್ಕರ್ಣಿ ಸಹೋದರಿ ಮತ್ತು ಪವನ್ ಜಾಗಿರ್ದಾರ್ ಮಧ್ಯೆ ಮಾತಿನ ಚಕಮಕಿ ನಡೆದಿದೆ.
ಬೀದಿ ನಾಯಿ ಗಲಾಟೆ ವಿವಾದ ತಾರಕಕ್ಕೇರಿ ಗುರುರಾಜ್ ಕುಲ್ಕರ್ಣಿ ಕೊಲೆಯಲ್ಲಿ ಅಂತ್ಯವಾಗಿದೆ. ಪೊಲೀಸರ ನಿರ್ಲಕ್ಷ್ಯದಿಂದಲೇ ಈ ಕೊಲೆ ನಡೆದಿದೆ ಅಂತಾ ಮೃತ ಗುರುರಾಜ್ ಕುಲ್ಕರ್ಣಿ ಸಹೋದರಿ, ಸಹೋದರ ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ತನ್ನ ಸಹೋದರಿಗೆ ಕಲ್ಲು ಬಡಿದ ವಿಚಾರಕ್ಕೆ ಸಂಬಂಧಿಸಿದಂತೆ ಗುರುರಾಜ್ ಕುಲ್ಕರ್ಣಿ, ಪವನ್ ಜಾಗಿರ್ದಾರ್ ಗೆ ಪ್ರಶ್ನೆ ಮಾಡಿದ್ದಾನೆ. ಈ ವೇಳೆ ಜಗಳ ತರಾಕಕ್ಕೇರಿ ಗುರುರಾಜ್ ಕುಲ್ಕರ್ಣಿ ಸಹೋದರನ ಮೇಲೆ ದಾಳಿ ಮಾಡಿ ಕಾಲು ಮುರಿದಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಜಾಗಿರ್ದಾರ್ ವಿರುದ್ಧ ಕಲಬುರಗಿ ಗ್ರಾಮೀಣ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲು ಮಾಡಲಾಗಿತ್ತು. ಪ್ರಕರಣ ದಾಖಲಾಗುತ್ತಿದಂತೆ ಪವನ್ ಜಾಗಿರ್ದಾರ್ ಜಾಮೀನು ಪಡೆದು ಹೊರ ಬಂದಿದ್ದ.
ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪವನ್ ಜಾಗಿರ್ದಾರ್ ಮತ್ತು ತಂಡ ಜಗಳ ಯಾಕೆ ಮುಂದುವರಿಸೋದು, ಮಾತನಾಡಿ ಬಗೆಹರಿಸಿಕೊಳ್ಳೋಣ ಅಂತ ಕಳೆದ ರಾತ್ರಿ ಫೋನ್ ಮಾಡಿ ಗುರುರಾಜ್ ಕುಲ್ಕರ್ಣಿಗೆ ಕರೆಯಿಸಿಕೊಂಡಿದ್ದರು ಎನ್ನಲಾಗಿದೆ. ಈ ವೇಳೆ ಹೋಟೆಲ್ ವೊಂದರ ಬಳಿ ಸಂಧಾನ ಮಾತುಕತೆ ನಡೆಯುತ್ತಿರುವಾಗ ಮಾತಿಗೆ ಮಾತು ಬೆಳೆದು ಮತ್ತೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆ, ಪವನ್ ಜಾಗಿರ್ದಾರ್ ತನ್ನೊಂದಿಗೆ ಇದ್ದ ಬೆಂಬಲಿಗರೊಂದಿಗೆ ಗುರುರಾಜ್ ಕುಲ್ಕರ್ಣಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಹತ್ಯೆ ಗೈದು ಎಸ್ಕೇಪ್ ಆಗಿದ್ದಾರೆ ಎಂದು ಗುರುರಾಜ್ ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಪವನ್ ಜಾಗಿರ್ದಾರ್ ವಿರುದ್ಧ ಈ ಹಿಂದೆ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ಆದ್ದರಿಂದಲೇ ಇಂದು ನಮ್ಮವರ ಕೊಲೆ ನಡೆದಿದೆ ಎಂದು ಗುರುರಾಜ್ ಕುಟುಂಬಸ್ಥರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಕೊಲೆ ವಿಚಾರ ಇಂದು ಬೆಳಗ್ಗೆ ಗೊತ್ತಾಗುತ್ತಿದಂತೆ ಕುಟುಂಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಪೊಲೀಸ್ ಕಮೀಷನರ್ ಅಥವಾ ಡಿಸಿಪಿ ಬಂದರೇ ಮೃತದೇಹ ತೆಗೆದುಕೊಂಡು ಹೋಗಲು ಅವಕಾಶ ಕೊಡುತ್ತೇವೆ ಅಂತಾ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದರು. ನಂತರ ಸ್ಥಳಕ್ಕೆ ಬಂದ ಡಿಸಿಪಿ ಅಡ್ಡೂರು ಶ್ರೀನಿವಾಸುಲು ಅವರಿಗೆ ಕುಟುಂಬಸ್ಥರು ತರಾಟೆಗೆ ತೆಗೆದುಕೊಂಡಿದ್ದರು. ಕೂಡಲೇ ಆರೋಪಿ ಪವನ್ ಜಾಗಿರ್ದಾರ್ ಮತ್ತು ಆತನ ಬೆಂಬಲಿಗರನ್ನು ಅರೆಸ್ಟ್ ಮಾಡಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಪಿ ಶ್ರೀನಿವಾಸುಲು, ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸುವುದಾಗಿ ಭರವಸೆ ನೀಡಿದರು.
ಒಟ್ಟಿನಲ್ಲಿ ಬೀದಿನಾಯಿ ವಿಚಾರಕ್ಕೆ ಶುರುವಾದ ಜಗಳ ಓರ್ವನ ಕೊಲೆಯಲ್ಲಿ ದುರಂತ ಅಂತ್ಯ ಕಂಡಿದ್ದು ಮಾತ್ರ ವಿಪರ್ಯಾಸ. ಕಲಬುರಗಿಯಲ್ಲಿ ಸರಣಿ ಕೊಲೆ, ಅಪರಾಧಗಳು ನಡೆಯುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿ ಮಾಡಿರೋದಂತು ಸುಳ್ಳಲ್ಲ.