ಗದಗ : ಶಿಕ್ಷಣ ಇಲಾಖೆಯೇನೋ ಹಲವಾರು ಅಡೆತಡೆಗಳ ನಡುವೆಯೂ ಶಾಲೆಗಳನ್ನು ಆರಂಭಿಸಿದೆ. ಆದರೆ ಇಲ್ಲೊಂದು ಶಾಲೆಯ ವಿದ್ಯಾರ್ಥಿಗಳು ಮಾತ್ರ ಶಾಲೆಗೆ ಹೋಗಬೇಕಾದ್ರೆ ನಿತ್ಯವು 4 ಕಿ.ಮೀ ನಷ್ಟು ದೂರ ನಡೆದುಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದ್ದು, ಶಾಲಾ ಸಮಯಕ್ಕೆ ಸರಿಯಾದ ಬಸ್ ಇಲ್ಲದೆ ವೇದನೆ ಅನುಭವಿಸುತ್ತಿದ್ದಾರೆ.
ಹೌದು ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಸ್ಥಗಿತಗೊಂಡ ಬಸ್ ಪುನರಾರಂಭವಾಗದ ಪರಿಣಾಮ, ವಿದ್ಯಾರ್ಥಿಗಳು ದಿನನಿತ್ಯ ಶಾಲೆಗೆ 4 ಕಿ.ಮೀ ನಡೆದುಕೊಂಡು ಹೋಗುವ ಪರಿಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ. ಜಿಲ್ಲೆಯ ಮುಂಡರಗಿ ತಾಲೂಕಿನ ಹೈತಾಪುರ ಹಾಗೂ ವೆಂಕಟಾಪುರ ಗ್ರಾಮದ ವಿದ್ಯಾರ್ಥಿಗಳು, ಪಕ್ಕದ ಯಕ್ಲಾಸಪುರ ಗ್ರಾಮದ ಸರಕಾರಿ ಪ್ರೌಢ ಶಾಲೆಗೆ ಹೋಗ ಬೇಕಾದರೆ ನಡೆದುಕೊಂಡೆ ಹೋಗುವ ಸ್ಥೀತಿ ನಿರ್ಮಾಣವಾಗಿದ್ದು ವಿದ್ಯಾರ್ಥಿಗಳು ಹೈರಾಣಾಗಿದ್ದಾರೆ.
ಕೋವಿಡ್ ಕಾಲದಲ್ಲಿ ಡಂಬಳ, ಮೇವುಂಡಿ, ಹೈತಾಪುರ ಮಾರ್ಗವಾಗಿ ಯಕ್ಲಾಸಪುರಕ್ಕೆ ಸಂಚರಿಸುವ ಬಸ್ನ್ನು ಸ್ಥಗಿತಗೊಳಿಸಲಾಗಿತ್ತು. ಬಳಿಕ ಇಂದಿನವರೆಗೂ ಈ ಮಾರ್ಗದ ಬಸ್ಸನ್ನು ಪುನರಾರಂಭಿಸಿಲ್ಲ ಪರಿಣಾಮ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಿತ್ಯ ಕಾಲ್ನಡಿಗೆಯಲ್ಲಿಯೇ ಶಾಲೆಗೆ ಹೊರಟಿದ್ದಾರೆ.
ಸಾರಿಗೆ ಸಂಸ್ಥೆಯ ಬಸ್ ಕೊರತೆ, ಮತ್ತು ಶಾಲೆ ಸಮಯಕ್ಕೆ ಸರಿಯಾಗಿ ಬಸ್ ಬಾರದ ಕಾರಣ ಗರಂ ಆದ ಪೋಷಕರು, ವಿದ್ಯಾರ್ಥಿಗಳು ಸಮರ್ಪಕವಾಗಿ ಬಸ್ ಬಿಡುವಂತೆ ಆಗ್ರಹಿಸಿದ್ದಾರೆ.