ಗದಗ: ಹಣವೆಂದರೆ ಹೆಣ ಕೂಡ ಬಾಯಿ ಬಿಡುತ್ತದೆ ಅನ್ನುವ ಕಾಲಘಟ್ಟದಲ್ಲಿ ಮಾನವೀಯತೆಯು ಇನ್ನೂ ಮರೆಯಾಗಿಲ್ಲ ಎಂಬುದನ್ನು ಗದಗ ಜಿಲ್ಲೆಯಲ್ಲಿ ನಡೆದ ಘಟನೆಯೊಂದು ಸಾಬೀತು ಮಾಡಿದೆ. ಒಂದಲ್ಲ, ಎರಡಲ್ಲ ಬರೋಬ್ಬರಿ 8 ತೊಲೆ ಬಂಗಾರವನ್ನು ಕಳೆದುಕೊಂಡವರಿಗೆ ಹಿಂತಿರುಗಿಸಿದ ಆಟೋ ಚಾಲ ಪ್ರಾಮಾಣಿಕತೆ ಮೆರೆದಿದ್ದಾರೆ.
ಆಟೋ ಚಾಲಕನ ಹೆಸರು ವೀರಣ್ಣ ಯಾವಗಲ್. ವೀಣಾ ಅವರು ಮರೆತು ಹೋಗಿದ್ದ ಬ್ಯಾಗ್ನಲ್ಲಿದ್ದ 8 ತೊಲೆ ಬಂಗಾರವನ್ನು ವೀರಣ್ಣ ಹಿಂತಿರುಗಿಸಿ ಜನ ಮೆಚ್ಚುಗೆಯನ್ನು ಗಳಿಸಿದ್ದಾರೆ.
ವಿವರಣೆಗೆ ಬರುವುದಾದರೆ, ಗದಗಿನ ನರಸಾಪುರದಿಂದ ಹತ್ತಿ ಗಂಜಿ ಬಸವೇಶ್ವರ ಸರ್ಕಲ್ ಬಳಿ ವೀಣಾ ಇಳಿದಿದ್ದರು. ಈ ವೇಳೆ ವೀಣಾ ಬ್ಯಾಗ್ ಅನ್ನು ಆಟೋದಲ್ಲಿ ಮರೆತು ಹೋಗಿದ್ದರು.
ಬಳಿಕ ಬ್ಯಾಗ್ ನೆನಪಾಗಿ ಗಾಬರಿಯಿಂದ ಅದೇ ಸ್ಥಳಕ್ಕೆ ಓಡೋಡಿ ಬಂದ ವೀಣಾ ಅವರಿಗೆ ವೀರಣ್ಣ ಬ್ಯಾಗ್ ಮರಳಿಸಿದರು. ಎಲ್ಲಿ ಆಟೋ ಚಾಲಕ ಇಲ್ಲ ಅಂದುಬಿಡುತ್ತಾನೋ ಎಂಬ ಅತಂಕದಲ್ಲಿದ್ದ ವೀಣಾಗೆ ಚಾಲಕನ ಪ್ರಾಮಾಣಿಕತೆ ಕಂಡು ಭಾವುಕರಾದರು. ಬಳಿಕ ಧನ್ಯವಾದಗಳನ್ನು ತಿಳಿಸಿದ್ದಾರೆ.
ಪ್ರಾಮಾಣಿಕತೆ ಮೆರೆದ ಆಟೋ ಚಾಲಕ ವೀರಣ್ಣನ ಒಳ್ಳೆಯ ಮನಸ್ಸನ್ನು ಜನರು ಕೊಂಡಾಡಿದ್ದಾರೆ. ಇದೇ ಸಂದರ್ಭದಲ್ಲಿ ಗದಗ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟರ್ ಅವರು ಸನ್ಮಾನ ಮಾಡಿ ಗೌರವಿಸಿದರು.