ಮುಂಬೈ: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ನಾರಾಯಣ ರಾಣೆರನ್ನು ಪೊಲೀಸರು ಬಂಧಿಸಿದ್ದರು. ಈ ಬೆನ್ನಲ್ಲೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಉದ್ಧವ್ ಠಾಕ್ರೆ ನೀಡಿದ್ದ ಹಳೆ ಹೇಳಿಕೆಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಯೋಗಿ ಆದಿತ್ಯನಾಥ್ ಒಬ್ಬ ಯೋಗಿ, ಹೇಗೆ ತಾನೇ ಸಿಎಂ ಆಗಲು ಸಾಧ್ಯ. ಇವರು ರಾಜಕೀಯ ತೊರೆದು ಗುಹೆಯಲ್ಲಿ ಕೂರಬೇಕು. ಶಿವಾಜಿಯ ಪಟ್ಟಾಭಿಷೇಕಕ್ಕೆ ಉತ್ತರ ಪ್ರದೇಶದಿಂದ ಪುರೋಹಿತರು ಬಂದಿದ್ದರು. ಈ ಸಂದರ್ಭದಲ್ಲಿ ಶಿವಾಜಿಗೆ ಹೂಮಾಲೆ ಹಾಕುವಾಗ ಯೋಗಿ ಚಪ್ಪಲಿ ಹಾಕಿಕೊಂಡಿದ್ದರು. ಅದೇ ಚಪ್ಪಲಿ ತೆಗೆದುಕೊಂಡು ಯೋಗಿಗೆ ಹೊಡೆಯಬೇಕು ಎಂದು ಠಾಕ್ರೆ ನೀಡಿದ ಹೇಳಿಕೆ ಕುರಿತಾದ ವಿಡಿಯೋವನ್ನು ಈಗ ವೈರಲ್ ಮಾಡಲಾಗಿದೆ.
ಈ ಹಿಂದೆ ಉದ್ಧವ್ ಠಾಕ್ರೆಗೆ ಕಪಾಳಕ್ಕೆ ಹೊಡೆಯುತ್ತಿದ್ದೆ ಎಂದು ನಾರಾಯಣ ರಾಣೆ ವಿವಾದ ಸೃಷ್ಟಿಸಿದ್ದರು. ಶಿವಸೇನಾ ಕಾರ್ಯಕರ್ತರ ಭಾರಿ ಪ್ರತಿಭಟನೆ ಕಾರಣ ರಾಣೆ ಬಂಧನವಾಯ್ತು. ಈ ಬೆನ್ನಲ್ಲೇ ಯೋಗಿ ಆದಿತ್ಯನಾಥ್ಗೆ ಚಪ್ಪಲಿಯಿಂದ ಹೊಡೆಯಬೇಕು ಎಂದು ಠಾಕ್ರೆ ನೀಡಿದ್ದ ಹೇಳಿಕೆಯನ್ನು ಬಿಜೆಪಿ ವೈರಲ್ ಮಾಡಿದೆ. ಅಲ್ಲದೇ ಠಾಕ್ರೆ ಹೇಳಿಕೆ ರಾಣೆ ಕೊಟ್ಟ ಸ್ಟೇಟ್ಮೆಂಟ್ಗಿಂತ ಹೇಗೆ ಭಿನ್ನ ಎಂದು ಬಿಜೆಪಿ ಪ್ರಶ್ನಿಸಿದೆ.
ಏನಿದು ವಿವಾದ?
ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯಂದು ಉದ್ಧವ್ ಠಾಕ್ರೆ, ಇದು ಎಷ್ಟನೇ ವರ್ಷದ ಸ್ವಾತಂತ್ರ್ಯೋತ್ಸವ ಎಂದು ಸಹಾಯಕನನ್ನು ಕೇಳಿದ್ದರು. ಇದನ್ನು ಕಟುವಾಗಿ ಟೀಕಿಸಿದ್ದ ರಾಣೆ, ‘ಸ್ವಾತಂತ್ರ್ಯದ ವರ್ಷವೇ ಮುಖ್ಯಮಂತ್ರಿಗೆ ತಿಳಿದಿಲ್ಲ ಎನ್ನುವುದು ನಾಚಿಕೆಗೇಡು. ನಾನು ಅಲ್ಲಿಯೇ ಇದ್ದಿದ್ದರೆ, ಸರಿಯಾಗಿ ಕಪಾಳಮೋಕ್ಷ ಮಾಡುತ್ತಿದ್ದೆ’ ಎಂದು ಹೇಳಿದ್ದರು.