ಮೈಸೂರು: ಎರಡು ವರ್ಷಗಳ ಹಿಂದೆ ಅಪಘಾತ ಪ್ರಕರಣವೊಂದರಲ್ಲಿ ಎಲ್ಲಾ ಕುಡುಕರು ಸೇರಿ ನನಗೆ ಕುಡುಕನ ಪಟ್ಟ ಕಟ್ಟಿದ್ದರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 8000 ಕೋಟಿ GST ಬಂದಿದೆ. ಕರ್ನಾಟಕದ ಪಾಲು ಕೇಂದ್ರ ಬಿಡುಗಡೆ ಮಾಡಿದೆ. ಕೆಲವರಿಗೆ ಸುಳ್ಳೇ ಮನೆ ದೇವರು, ಸುಳ್ಳನ್ನೇ ಸತ್ಯ ಎಂದು ಹೇಳುತ್ತಾರೆ. ನನಗೆ ಕುಡುಕನ ಪಟ್ಟ ಕಟ್ಟಿದ ಹಾಗೆಯೇ GST ವಿಚಾರದಲ್ಲೂ ಸುಳ್ಳು ಆರೋಪ ಮಾಡಲಾಗಿದೆ ಎಂದರು.
ಕರ್ನಾಟಕದ ಪಾಲನ್ನ ಕೇಂದ್ರ ಬಿಡುಗಡೆ ಮಾಡಿದೆ. ಕೇಂದ್ರಕ್ಕೆ ಆಸ್ತಿಯನ್ನ ಉತ್ಪಾದನಾ ಘಟಕವಾಗಿ ಪರಿವರ್ತಿಸಲು ಆಸಕ್ತಿ ಇದೆ. ಆಸ್ತಿ ನಿರ್ವಹಣೆ ಹೆಸರಲ್ಲಿ ಬಿಳಿ ಆನೆ ಸಾಕುವ ರೀತಿ ಆಗಬಾರದು. ಈ ಹಿಂದೆ ಆಸ್ತಿ ನಿರ್ವಹಣೆ ಹೆಸರಲ್ಲೇ ಭ್ರಷ್ಟಾಚಾರ ನಡೆದಿದೆ. ಭ್ರಷ್ಟಾಚಾರದಿಂದ ಹೊರ ತರುವುದು ಮತ್ತು ಉತ್ಪಾದನಾ ಘಟಕಾವಾಗಿ ಪರಿವರ್ತಿಸುವುದು ಈ ಯೋಜನೆ ಉದ್ದೇಶ ಎಂದು ಸಿ.ಟಿ ರವಿ ಹೇಳಿದರು.
ಬೆಂಗಳೂರು-ಮೈಸೂರು ದಶಪಥ ರಸ್ತೆ ಯೋಜನೆ ಕ್ರೆಡಿಟ್ ಪಡೆಯಲು ಕಿತ್ತಾಟ ನಡೆಯುತ್ತಿದೆ. ಕೆಲವರು ಚಂದ್ರಲೋಕದ ಸೈಟಿಗೆ ಈಗಲೇ ಅರ್ಜಿ ಹಾಕಿಸಿ ಬಿಡ್ತಾರೆ. ಈಗಲೇ ಹೋಗಿ ಅಲ್ಲಿ ಮನೆ ಕಟ್ಟೋಕ್ಕಾಗುತ್ತಾ? ಕೆಲವರು ಅರ್ಜಿ ಹಾಕಿ ಕೊನೆಗೆ ನಾನೇ ಅರ್ಜಿ ಕೊಟ್ಟಿದ್ದೆ ಅಂತಾರೆ ಎಂದು ವ್ಯಂಗ್ಯವಾಡಿದರು.
ಅರ್ಜಿ ಕಿಮ್ಮತ್ತೇನು, ಹಣ ಬಿಡುಗಡೆಯಾಗಿದ್ದು ಯಾವಾಗ, ಮಂಜೂರಾಗಿದ್ದು ಯಾವಾಗ? ಅರ್ಜಿ ಸಲ್ಲಿಸಿದವರಿಗೆ ಏನು ಕಿಮ್ಮತ್ತು ಕೊಡಬೇಕೋ ಕೊಡಿ. ಹಣ ಬಿಡುಗಡೆ ಮಾಡಿ, ಕೆಲಸ ಪ್ರಾರಂಭ ಮಾಡಿದವರಿಗೆ ಏನು ಕಿಮ್ಮತ್ತು ಕೊಡಬೇಕೋ ಕೊಡಿ ಎಂದು ತಿಳಿಸಿದರು.