ಹೈದರಾಬಾದ್: ಇಲ್ಲಿನ ಕೇಂದ್ರೀಯ ವಿಶ್ವವಿದ್ಯಾಲಯದ ಎಂಟೆಕ್ ವಿದ್ಯಾರ್ಥಿನಿ ಆರ್. ಮೌನಿಕಾ ಆತ್ಮಹತ್ಯೆಯು ಇಡೀ ಕಾಲೇಜನ್ನು ಆಘಾತಕ್ಕೆ ದೂಡಿದೆ.
ಮೌನಿಕಾ ನ್ಯಾನೊತಂತ್ರಜ್ಞಾನದ ವಿದ್ಯಾರ್ಥಿನಿಯಾಗಿದ್ದಳು. ಈಕೆ ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ಪರುಪಲ್ಲಿ ಗ್ರಾಮದ ನಿವಾಸಿ. ಸೋಮವಾರ ಸಂಜೆ ಹಾಸ್ಟೆಲ್ನ ಆಕೆಯ ರೂಮಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ. ಇದಕ್ಕೂ ಮುನ್ನ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದಾದರೂ ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿದ್ದಳು. ವಿಶ್ವವಿದ್ಯಾಲಯವು ಗಾಚಿಬೌಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುತ್ತದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
27 ವರ್ಷದ ಮೌನಿಕಾ ರಘುಶಾಲಾ ಲಾಚಯ್ಯ ಮತ್ತು ರಜಿತಾ ದಂಪತಿಯ ಪುತ್ರಿ. ಹೈದರಾಬಾದ್ ಸೆಂಟ್ರಲ್ ಯೂನಿವರ್ಸಿಟಿಯಲ್ಲಿ ದ್ವಿತೀಯ ವರ್ಷದ ಎಂಟೆಕ್ ವಿದ್ಯಾರ್ಥಿನಿ ಆಗಿದ್ದಳು. ಹಾಸ್ಟೆಲ್ ನಂಬರ್ 7ರಲ್ಲಿ ತಂಗಿದ್ದ ಆಕೆ ಸೋಮವಾರ ಬೆಳಗ್ಗೆಯಿಂದ ತರಗತಿಯಲ್ಲಿ ಕಾಣಿಸಿಕೊಳ್ಳಲಿಲ್ಲ. ಬಹುಶಃ ಆರೋಗ್ಯ ಸರಿಯಿಲ್ಲವೇನೋ ಅಂತಾ ಸಹಪಾಠಿಗಳು ಅಂದುಕೊಂಡಿದ್ದರು. ಆದರೂ, ಸಂಜೆವರೆಗೂ ಆಕೆ ಕಾಣಿಸಿಕೊಳ್ಳದ್ದಾಗ ಅನುಮಾನ ಬಂದು ಸಂಜೆ ಆಕೆಯ ರೂಮಿನ ಬಾಗಿಲು ಬಡಿದಿದ್ದಾರೆ. ಯಾವುದೇ ಪ್ರತಿಕ್ರಿಯೆ ದೊರೆಯದಿದ್ದಾಗ ಬಾಗಿಲು ಹೊಡೆದು ಒಳ ನುಗ್ಗಿದಾಗ ಮೌನಿಕಾ ದೇಹ ಸೀಲಿಂಗ್ ಫ್ಯಾನ್ನಲ್ಲಿ ನೇತಾಡುತ್ತಿತ್ತು. ತಕ್ಷಣ ಕೆಳಗಿಳಿಸಿ ಆಸ್ಪತ್ರೆಗೆ ಕೊಂಡೊಯ್ದರು ಸಹ ಯಾವುದೇ ಪ್ರಯೋಜನ ಆಗಲಿಲ್ಲ.
ತನಿಖೆ ಆರಂಭಿಸಿರುವ ಪೊಲೀಸರಿಗೆ ಮೌನಿಕಾ ಕೋಣೆಯಲ್ಲಿ ಸೂಸೈಡ್ ನೋಟ್ ಪತ್ತೆಯಾಗಿದೆ. ತನ್ನನ್ನು ತಾನು ‘ಕೆಟ್ಟ ಮಗಳೆಂದು’ ಕರೆದುಕೊಂಡಿದ್ದಾಳೆ ಮತ್ತು ಕ್ಷಮಿಸುವಂತೆ ಪಾಲಕರನ್ನು ಕೇಳಿಕೊಂಡಿದ್ದಾಳೆ. ಅಲ್ಲದೆ, ತನ್ನ ಸಾವಿಗೆ ಯಾರೂ ಕಾರಣರಲ್ಲ ಅಂತಾನೂ ಬರೆದಿಟ್ಟಿದ್ದಾಳೆ.
ಪ್ರೌಢ ಶಾಲೆಯ ಹಂತದವರಿಗೆ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ್ದ ಮೌನಿಕಾ, ಇಂಜಿನಿಯರಿಂಗ್ ಮುಗಿಸಿ, ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ನ್ಯಾನೊತಂತ್ರಜ್ಞಾನ ವಿಷಯದ ಮೇಲೆ ಎಂಟೆಕ್ ಮಾಡುತ್ತಿದ್ದಳು. ಇದೀಗ ಮೌನಿಕಾ ಆತ್ಮಹತ್ಯೆ ಪ್ರಕರಣ ಇಡೀ ಕ್ಯಾಂಪಸ್ ಅನ್ನೇ ಭೀತಿಯಲ್ಲಿ ಮುಳುಗಿಸಿದೆ. ಅಲ್ಲದೆ, ಮೌನಿಕಾ ಸ್ನೇಹಿತರು ಆಕೆಯ ಸಾವಿಗೆ ಕಂಬನಿ ಮಿಡಿದಿದ್ದಾರೆ. ಅವಳ ಸಾವಿಗೆ ಇನ್ನೇನಾದರೂ ಕಾರಣ ಇರಬಹುದು ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. (