ಬೆಂಗಳೂರು: ಮಂಗಳವಾರ ರಾತ್ರಿ ಕಾವಲ್ ಭೈರಸಂದ್ರದಲ್ಲಿ ಪುಂಡರು ಪಕ್ಕಾ ಪ್ಲಾನ್ ಮಾಡಿ ವಿಕೃತಿ ಮೆರೆದಿದ್ದಾರೆ.ಪುಲಿಕೇಶಿ ನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಅಕ್ಕನ ಮಗ ನವೀನ್ ಫೇಸ್ ಬುಕ್ ನಲ್ಲಿ ಸಮುದಾಯವನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಗುಂಪೊಂದು ದಿಢೀರ್ ಆಗಿ ರಾತ್ರಿ ಕಾವಲ್ ಭೈರಸಂದ್ರದಲ್ಲಿರುವ ಶಾಸಕ ರ ನಿವಾಸದ ಮುಂದೆ ಜಮಾಯಿಸಿ ಬೆಂಕಿ ಹಚ್ಚಿದೆ.
ಕಿಡಿಗೇಡಿಗಳ ಲಾಂಗ್, ದೊಣ್ಣೆ, ಕಲ್ಲುಗಳನ್ನು ಶೇಖರಿಸಿ ತಂದಿದ್ದರು. ಕೃತ್ಯಕ್ಕೂ ಮೊದಲು ಎಲ್ಲರನ್ನೂ ಪ್ರಚೋದಿಸಿ ಕರೆತರಲಾಗಿದೆ. ಅಷ್ಟೇ ಅಲ್ಲದೇ ಬೆಂಕಿ ಹಚ್ಚಲು ಗುಂಪು ವ್ಯವಸ್ಥೆ ಮಾಡಿಕೊಂಡು ಬಂದಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುತ್ತಿದೆ.
100ಕ್ಕೂ ಹೆಚ್ಚು ಪುಂಡರು ಕಲ್ಲು ತೂರಾಟ ನಡೆಸಿ ದೊಣ್ಣೆ ಹಿಡಿದು ಕಚೇರಿಯನ್ನು ಒಡೆದು ಹಾಕಿದ್ದಾರೆ. ಈ ವೇಳೆ ವಿಡಿಯೋ ಮಾಡುತ್ತಿದ್ದವರ ಮೇಲೆ ಹಲ್ಲೆ ನಡೆಸಿ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದಾರೆ.
ಘಟನೆಯಲ್ಲಿ ಶಾಸಕರ ಮನೆ ಕಿಟಕಿ ಗಾಜುಗಳು ಪುಡಿ ಪುಡಿಯಾಗಿದ್ದು, ಆಫೀಸ್ ಬಳಿ ನಿಂತಿದ್ದ ಕಾರುಗಳ ಮೇಲೆ ಬೆಂಕಿ ಹಚ್ಚಿದ್ದಾರೆ. ಬೆಂಕಿಯನ್ನು ನೋಡಿ ಅಲ್ಲಿದ್ದ ಜನ ಓಡಿ ಹೋಗಿ ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ. ಪೊಲೀಸರು ಅಕ್ಕಪಕ್ಕದ ಎಲ್ಲಾ ರಸ್ತೆ ಗಳನ್ನು ಮುಚ್ಚಿದ್ದಾರೆ.
ಪೊಲೀಸರ ಮೇಲೆ ಯುವಕರ ಗುಂಪು ದಾಳಿ ಮಾಡಿದೆ. ರಸ್ತೆಯಲ್ಲಿ ಸಿಕ್ಕ ಸಿಕ್ಕ ವಸ್ತುಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ನಿವಾಸಿಗಳು ಬಾಗಿಲು ಮುಚ್ಚಿಕೊಂಡು ಒಳಗಡೆ ಹೋಗಿದ್ದಾರೆ. ಸ್ಥಳದಲ್ಲಿದ್ದ ಅಂಗಡಿ ಮಾಲೀಕರು ಬಾಗಿಲು ಮುಚ್ಚಿ ಓಡಿ ಹೋಗಿದ್ದಾರೆ.
ಪೊಲೀಸ್ರಿಗೆ ಕಾಲ್: ಇಮಿಡಿಯಟ್ ರಿಪೋರ್ಟ್ ಟು ಡಿಜಿ ಹಳ್ಳಿ ಅಂತಾ ಡೇ ಡ್ಯೂಟಿ, ನೈಟ್ ಡ್ಯೂಟಿ ಪೊಲೀಸ್ರು ಸಹ ಸ್ಪಾಟ್ ಗೆ ಬರುವಂತೆ ಕಾಲ್ ಹೋಗಿದೆ. ವೈರ್ ಲೆಸ್ ಮೂಲಕ ಎಲ್ಲಾ ಡಿವಿಷನ್ಗಳಿಗೆ ಕಂಟ್ರೋಲ್ ರೂಂ ನಿಂದ ಮೆಸೇಜ್ ನೀಡಲಾಗಿದ್ದು ಪೊಲೀಸರ ಆಗಮನಕ್ಕಾಗಿ ಕಾಯುತ್ತಿದ್ದಾರೆ. ವಾಟರ್ ಜೆಟ್, ಸಹ ಸ್ಥಳಕ್ಕೆ ಬರುವಂತೆ ಸೂಚನೆ ನೀಡಲಾಗಿದೆ.
ನೂರಾರು ಸಂಖ್ಯೆಯಲ್ಲಿ ಜನ ಸೇರಿದ ಕಾರಣ ಪೊಲೀಸರು ಸಹ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಹಿಂದೇಟು ಹಾಕಿದ್ದಾರೆ. ಡಿಜೆಇ ಹಳ್ಳಿ ಠಾಣೆಯ ಮುಂದೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.