ಹಾವೇರಿ: ರಾಜ್ಯದಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಜಿಲ್ಲೆಯಲ್ಲಿ ಮಳೆರಾಯ ಎರಡು ದಿನಗಳಿಂದ ಕೊಂಚ ವಿಶ್ರಾಂತಿ ನೀಡಿದ್ದಾನೆ. ಆದರೆ ನದಿಗೆ ಹರಿದು ಬರುತ್ತಿರುವ ನೀರು ಮಾತ್ರ ಕಡಿಮೆಯಾಗಿಲ್ಲ. ಸೇತುವೆ ಮೇಲಿಂದ ತುಂಬಿ ಹರಿಯೋ ನದಿ ನೀರಲ್ಲಿ ಜಿಗಿದು ಈಜಾಡುವ ಮೂಲಕ ಯುವಕರು ಹುಚ್ಚಾಟ ಪ್ರದರ್ಶಿಸಿದ್ದಾರೆ.ಹಾವೇರಿ ತಾಲೂಕಿನ ಹೊಸರಿತ್ತಿ ಗ್ರಾಮದ ವರದಾ ನದಿಯಲ್ಲಿ ಘಟನೆ ನಡೆದಿದ್ದು, ಕಳೆದ ಒಂದು ವಾರದಿಂದ ವರದಾ ನದಿ ಭರಪೂರ ತುಂಬಿ ಹರಿಯುತ್ತಿದೆ. ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಇಬ್ಬರು ಯುವಕರು ಸೇತುವೆ ಮೇಲಿನಿಂದ ಜಿಗಿದು ಈಜಾಡುವ ಮೂಲಕ ಹುಚ್ಚಾಟ ಮೆರಿದ್ದಾರೆ. ಜೀವದ ಹಂಗು ಲೆಕ್ಕಿಸದೆ ಸೇತುವೆ ಮೇಲಿಂದ ಜಿಗಿದು, ಭರ್ಜರಿಯಾಗಿ ಹರಿಯುತ್ತಿರುವ ವರದಾ ನದಿಯಲ್ಲಿ ಈಜಾಡಿದ್ದಾರೆ.
ಸೇತುವೆ ಮೇಲಿಂದ ಜಿಗಿದು ಈಜಿ ಯುವಕರು ದಡ ಸೇರಿದ್ದಾರೆ. ಇನ್ನೂ ಕೆಲ ಯುವಕರು ಸೇತುವೆ ಮೇಲೆ ನಿಂತು ಚೀರಾಡಿ, ಕೂಗಾಡಿ ನದಿಗೆ ಹಾರಿದ ಯುವಕರಿಗೆ ಪ್ರೋತ್ಸಾಹ ನೀಡಿದ್ದಾರೆ. ಸ್ವಲ್ಪ ಯಾಮಾರಿದರೂ ಯುವಕರು ನೀರು ಪಾಲಾಗುತ್ತಿದ್ದರು. ಇದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಜೊತೆಗೆ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.