ಬೀದರ್(ಜ.18): ರಾಜ್ಯದ ನೆಲ, ಜಲ ಹಾಗೂ ಭಾಷೆಯ ಉಳಿವಿಗಾಗಿ ಕಳೆದ 2 ದಶಕದಲ್ಲಿ ರಾಜ್ಯದ ವಿವಿಧ ಜೈಲುಗಳನ್ನು ಕಂಡಿದ್ದೇನೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದ್ದಾರೆ.
ಅವರು ಶುಕ್ರವಾರ ನಗರದ ರಂಗಮಂದಿರದಲ್ಲಿ ಡಾ.ಲಿಂ.ಚನ್ನಬಸವ ಪಟ್ಟದ್ದೇವರ 130ನೇ ಜಯಂತಿ ಹಾಗೂ ಕರ್ನಾಟಕ ಏಕಿಕರಣ ಪ್ರಶಸ್ತಿ ಪುರಸ್ಕೃತರಾದ ಡಾ. ಭೀಮಣ್ಣ ಖಂಡ್ರೆ ಅವರ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೆಂಗಳೂರು ಭಾಷಾ ಅಲ್ಪಸಂಖ್ಯಾತರ ಕೊಂಪೆಯಾಗಿತ್ತು. ಅದರಿಂದ ಮುಕ್ಕಗೊಳಿಸಿದ್ದೇನೆ. 1999ರಲ್ಲಿ ಕೇವಲ 22 ಜನರೊಂದಿಗೆ ಕನ್ನಡ ಭಾಷಾ ಉಳಿವಿಗಾಗಿ ಆರಂಭಿಸಲಾದ ಕರವೇ ಹೋರಾಟಕ್ಕೆ ಇಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸುಮಾರು 65 ಲಕ್ಷ ಜನ ಕಾರ್ಯಕರ್ತರಿದ್ದಾರೆ ಎಂದರು.
ನನ್ನಂತಹ ಹೋರಾಟಗಾರನಿಗೆ ಸರ್ಕಾರಗಳು ಬಹುತೇಕ ಜಿಲ್ಲೆಯ ಜೈಲುಗಳನ್ನು ತೋರಿಸಿದ್ದಾರೆ. ಈ ಹಿಂದೆ ದೇವೇಗೌಡ ಮುಖ್ಯಮಂತ್ರಿಯಾಗಿದ್ದಾಗ 20 ದಿನ ಜೈಲು ಸೇರಿದ್ದರೆ, ಅತಿ ಹೆಚ್ಚು ಜೈಲು ಸೇರಿದ್ದು ಎಸ್ಎಂ ಕೃಷ್ಣ ಅವರ ಅವಧಿಯಲ್ಲಿ. ಬೆಳಗಾವಿಯಲ್ಲಿ ಕಳೆದ 25 ವರ್ಷಗಳಿಂದ ಕನ್ನಡದವರು ಮೇಯರ್ ಆಗಿರಲಿಲ್ಲ. ನಮ್ಮ ಕರವೇಯಿಂದ ಒಬ್ಬ ಕನ್ನಡತಿಯನ್ನು ಮೇಯರ್ ಪಟ್ಟಕ್ಕೇರಿಸಿತ್ತು. ಬೀದರ್ ಜಿಲ್ಲೆಯಲ್ಲಿ ಕೂಡ ಎಂಇಎಸ್ ತನ್ನ ಬೇರೂರುವ ಪ್ರಯತ್ನ ಮಾಡಿತ್ತು. ಆದರೆ ಇಲ್ಲಿನ ಪೂಜ್ಯರು, ಭೀಮಣ್ಣ ಖಂಡ್ರೆ ಅವರಂತಹ ಹೋರಾಟಗಾರದಿಂದ ಇದು ಸಾಧ್ಯವಾಗಿದೆ ಎಂದು ಹೇಳಿದರು.