ಚಿತ್ರದುರ್ಗ: ನಾನು ಯಾವತ್ತೂ ಸಿಎಂ ಕನಸು ಕಂಡವನಲ್ಲ, ಜನರ ಪರವಾಗಿ ಕೆಲಸ ಮಾಡಿದ್ದೇನೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ನಡೆದ ‘ಬಿಎಸ್ವೈ ಅಭಿಮಾನೋತ್ಸವ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ಜೀವನದ ಪರಮ ದಿನ, ಅಭಿಮಾನದಲ್ಲಿ ತೇಲಿಸಿದ ದಿನ. ನಿಮ್ಮೆಲ್ಲರ ಮುಂದೆ ನೀವು ಎತ್ತಿ ಬೆಳೆಸಿದ ಮಗನಾಗಿ ಇವತ್ತು ನಿಮ್ಮ ಮುಂದೆ ನಿಂತಿದ್ದೇನೆ. ಈ ಜನಸಾಗರ ನೋಡಿ ಮಾತು ಬರುತ್ತಿಲ್ಲ, ಅಭಿಮಾನದ ಹೊಳೆಯಲ್ಲಿ ತೇಲಿಸಿದ್ದೀರಿ. ನಿಮ್ಮ ಅಭಿಮಾನಿಕ್ಕೆ ಚಿರಋಣಿ ಆಗಿದ್ದೇನೆ. ಎಷ್ಟೇ ಕಾರ್ಯಕ್ರಮ ಇದ್ದರು ಅಮಿತ್ ಶಾ ಬಂದಿದ್ದಾರೆ. ದುರ್ಗದಲ್ಲಿ ವೀರ ಮದಕರಿ ರೀತಿ ಅಮಿತ್ ಶಾ ಕಾಣಿಸುತ್ತಿದ್ದಾರೆ. ಮೋದಿ ಅವರಿಗೆ ಹೆಗಲು ಕೊಟ್ಟು ಅಮಿತ್ ಶಾ ಕೆಲಸ ಮಾಡುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಕಮಲ ಅರಳಿಸಿದ್ದಾರೆ. ಪಶ್ಚಿಮ ಬಂಗಾಳ ಗೆಲುವು ಭಾರತದ ಗೆಲವು. ಈ ಜನಸಾಗರ ಪರವಾಗಿ ಮೋದಿ, ಅಮಿತ್ ಶಾಗೆ ನಾನು ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದರು.
ಯಡಿಯೂರಪ್ಪ ಚಿನ್ನದ ಚಮಚ ಇಟ್ಟುಕೊಂಡು ಬಂದಿಲ್ಲ. ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬಂದವನು. ನೊಂದವರ ಪರವಾಗಿ ಕೆಲಸ ಮಾಡಿದ್ದೇನೆ. ಭಾಗ್ಯಲಕ್ಷ್ಮಿ ಯೋಜನೆ ನನಗೆ ಸಾರ್ಥಕ ಭಾವನೆ ಮೂಡಿಸಿದೆ. ಕೃಷಿ ಬಜೆಟ್ ಮಂಡಿಸಿದ್ದು ನಾನು ಎಂದೂ ಮರೆಯಲಾರೆ. ಶಕ್ತಿ ಮೀರಿ ಕೆಲಸ ಮಾಡಿದ್ದೇನೆ. ಆರ್ಎಸ್ಎಸ್ ಕಾರ್ಯಕರ್ತನಾಗಿ ಕೆಲಸ ಮಾಡಿದ್ದು ಇದಕ್ಕೆ ಕಾರಣ ಎಂದು ನುಡಿದರು.
ಮೋದಿ ಇನ್ನೂ 10 ವರ್ಷ ದೇಶ ಮುನ್ನಡೆಸಬೇಕು. ಪಶ್ಚಿಮ ಬಂಗಾಳದಲ್ಲಿ ಇವತ್ತು ಕಮಲ ಅರಳಿದೆ. 50 ವರ್ಷಗಳಿಂದ ಯಡಿಯೂರಪ್ಪರನ್ನ ಬೆಳೆಸಿದ್ದೀರಾ. ನಿಮ್ಮ ಋಣ ಯಾವತ್ತು ಮರೆಯಲ್ಲ. ನನ್ನ ಕೊನೆ ಉಸಿರು ಇರೋವರೆಗೂ ವಿರಮಿಸೋದಿಲ್ಲ, ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಹೇಳಿದರು.
Laxmi News 24×7