ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸೆಲ್ನಲ್ಲಿ ಮೊಬೈಲ್ ಫೋನ್ ಪತ್ತೆಯಾಗಿದ್ದು, ಈ ಸಂಬಂಧ ಎಫ್ಐಆರ್ ದಾಖಲಾಗಿದೆ.
ಸಿಸಿಬಿ ಅಧಿಕಾರಿಗಳ ದಾಳಿ ವೇಳೆ ಮೊಬೈಲ್ ಪತ್ತೆಯಾಗಿದ್ದು, ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸಿಸಿಬಿ ಇನ್ಸ್ಪೆಕ್ಟರ್ ಸುಬ್ರಮಣ್ಯಸ್ವಾಮಿ ಅವರು ಪೊಲೀಸರಿಗೆ ವಿವರವಾದ ದೂರು ನೀಡಿದ್ದಾರೆ.
ದೂರಿನಲ್ಲೇನಿದೆ?
ಬೆಂಗಳೂರು ನಗರ ಅಪರ ಪೊಲೀಸ್ ಆಯುಕ್ತರು ಕಾರಾಗೃಹದಲ್ಲಿ ಇರುವ ಎಲ್ಲಾ ಬ್ಯಾರಕ್ಗಳಲ್ಲಿ ಶೋಧ ನಡೆಸಿ, ಅಕ್ರಮವಾಗಿ ಇಟ್ಟುಕೊಂಡಿರುವ ಮೊಬೈಲ್ ಪೋನ್ಗಳು, ಮಾದಕ ವಸ್ತುಗಳು ಹಾಗೂ ಇತರ ನಿಷೇಧಿತ ವಸ್ತುಗಳನ್ನು ಅಮಾನತುಪಡಿಸಿಕೊಳ್ಳಲು ಆದೇಶ ಮಾಡಿದ್ದರು. ಇದಕ್ಕಾಗಿ ನನ್ನನ್ನು ಕಾರಾಗೃಹದ ಹೈ-ಸೆಕ್ಯೂರಿಟಿ ಬ್ಯಾರಕ್ಗಳನ್ನು ಶೋಧನೆ ನಡೆಸಲು ನೇಮಕ ಮಾಡಿದ್ದರು. ಇನ್ನೂ ಕೇಂದ್ರ ಕಾರಾಗೃಹದ ಅಧೀಕ್ಷಕರಿಗೆ ಇಬ್ಬರು ಅಧಿಕಾರಿಗಳನ್ನು ಪಂಚರಾಗಿ ನೇಮಿಸಲು ಕೋರಿ ನಾನು ಮನವಿಯನ್ನು ಸಲ್ಲಿಸಿದ್ದೆ.
ನನ್ನ ಕೋರಿಯಂತೆ ಪಂಚರು ಮತ್ತು ಸಿಬ್ಬಂದಿಯಾಗಿ ಪಿಎಸ್ಐ ಕೇಶವಮೂರ್ತಿ, ಎಎಸ್ಐ ರಂಗಸ್ವಾಮಯ್ಯ, ಹೆಚ್ಸಿ ಶಶಿಧರ್, ಹೆಚ್.ಸಿ ಲೋಕೇಶ್ ಮತ್ತು ಹೆಚ್.ಸಿ ರಾಜು ಎಂಬುವವರನ್ನು ನೇಮಿಸಿದರು. ಅವರೆಲ್ಲರೊಂದಿಗೆ ನಾನು ಮದ್ಯಾಹ್ನ 02:05 ರಿಂದ ರಾತ್ರಿ 09:00 ಗಂಟೆಯವರೆಗೆ ಭದ್ರತಾ ವಿಭಾಗ 01 ರಿಂದ 03ರವರೆಗೆ ಶೋಧ ನಡೆಸಿದ್ದೇವೆ. ಇದರಲ್ಲಿ ಭದ್ರತಾ ವಿಭಾಗ 3ರ 1ನೇ ಮಹಡಿಯ ರೂಂ ನಂಬರ್ 04ರಲ್ಲಿ ಒಂದು ತಿಳಿ ನೀಲಿ ಬಣ್ಣದ ಮೊಬೈಲ್, ನೀಲಿ ಬಣ್ಣದ ನೋಟ್ ಪುಸ್ತಕ ಮತ್ತು ಒಂದು ಕಪ್ಪು ಬಣ್ಣದ ಸ್ಯಾನ್ಡಿಸ್ಕ್ ಪೆನ್ಡ್ರೈವ್ ದೊರೆತಿದೆ.
ಈ ವೇಳೆ ರೂಮಿನಲ್ಲಿದ್ದ ಖೈದಿಗಳನ್ನು ವಿಚಾರಣೆ ಮಾಡಿದಾಗ, ಓರ್ವ ಪ್ರಜ್ವಲ್ ರೇವಣ್ಣ ಸಜಾ ಕೈದಿ ಹಾಗೂ ಇನ್ನೋರ್ವ ಪ್ರತಾಪ್ ರಾಯ್ ವಿಚಾರಣಾ ಖೈದಿಯಾಗಿರುವುದಾಗಿ ತಿಳಿಸಿದ್ದಾರೆ. ಆಗ ತಮ್ಮ ರೂಮಿನಲ್ಲಿ ಸಿಕ್ಕಿದ ಮೊಬೈಲ್, ಚಾರ್ಜರ್ ಮತ್ತು ನೋಟ್ ಪುಸ್ತಕ ಮತ್ತು ಪೆನ್ಡ್ರೈವ್ ಬಗ್ಗೆ ವಿಚಾರಣೆ ಮಾಡಿದಾಗ, ಪ್ರಜ್ವಲ್ ರೇವಣ್ಣ ನೋಟ್ ಪುಸ್ತಕ ತಮ್ಮದು, ಪ್ರತಾಪ್ ರೈ ಮೊಬೈಲ್, ಚಾರ್ಜರ್ ಮತ್ತು ಪೆನ್ಡ್ರೈವ್ ತಮ್ಮದು ಎಂದು ತಿಳಿಸಿದ್ದಾರೆ. ಈ ಫೋನನ್ನು ತಾನು ಆಗ್ಗಾಗ್ಗೆ ಸಂಬAಧಿಕರು ಮತ್ತು ಲಾಯರ್ಗೆ ಕರೆ ಮಾಡಲು ಬಳಸುತ್ತೇವೆ. ಪ್ರಜ್ವಲ್ ರೇವಣ್ಣ ಸಹ ಲಾಯರ್ ಮತ್ತು ಸಂಬಂಧಿಕರಿಗೆ ಕರೆ ಮಾಡಲು ಬಳಸ್ತಿದ್ದಾಗಿ ಹೇಳಿಕೆ ನೀಡಿದ್ದಾರೆ.
ಮೊಬೈಲ್ ಅನ್ನು ಪರಿಶೀಲಿಸಿದಾಗ ಅದರಲ್ಲಿ ಫೇಸ್ಬುಕ್, ವಾಟ್ಸಪ್, ಇನ್ಸ್ಟಾಗ್ರಾಮ್, ನೆಟ್ಫ್ಲಿಕ್ಸ್, ಪ್ರೈಮ್ ವಿಡಿಯೋ ಮುಂತಾದ ಅಪ್ಲಿಕೇಷನ್ಗಳು ಡೌನ್ಲೋಡ್ ಮಾಡಿಕೊಂಡಿದ್ದು, ಅವುಗಳು ಪಾಸ್ವರ್ಡ್ನಿಂದಪ್ರೊಟೆಕ್ಟ್ ಆಗಿರುವುದು ಕಂಡು ಬಂದಿದೆ. ಇವುಗಳ ಪಾಸ್ವರ್ಡ್ ಕೇಳಿದಾಗ ಇಬ್ಬರು ಗೊತ್ತಿಲ್ಲ ಎಂದಿದ್ದಾರೆ. ನಂತರ ಮೊಬೈಲ್, ಚಾರ್ಜರ್, ಪೆನ್ಡ್ರೈವ್ ಮತ್ತು ನೋಟ್ ಪುಸ್ತಕಗಳನ್ನು ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತುಪಡಿಸಿಕೊಳ್ಳಲಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಕೇಂದ್ರ ಕಾರಾಗೃಹದಲ್ಲಿ ಸಜಾ ಖೈದಿಯಾಗಿರುವ ಪ್ರಜ್ವಲ್ ರೇವಣ್ಣ ಮತ್ತು ವಿಚಾರಣಾ ಖೈದಿಯಾದ ಪ್ರತಾಪ್ ರೈ ಯಾರಿಂದಲೋ ಕಾರಾಗೃಹದ ಒಳಗೆ ನಿಷೇಧಿತ ವಸ್ತುಗಳಾದ ಮೊಬೈಲ್ ಫೋನ್, ಪೆನ್ಡ್ರೈವ್, ಚಾರ್ಜರ್ ಮತ್ತು ನೋಟ್ ಪುಸ್ತಕಗಳನ್ನು ಅನಧಿಕೃತವಾಗಿ ತರಿಸಿಕೊಂಡು ಅವುಗಳನ್ನು ಬಳಕೆ ಮಾಡಿದ್ದಾರೆ. ಹೀಗಾಗಿ ಇಬ್ಬರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿದ್ದಾರೆ.
Laxmi News 24×7