ಹಾಸನ: ವರ್ಷಕ್ಕೊಮ್ಮೆ ಮಾತ್ರ ದರ್ಶನ ಕರುಣಿಸೋ ಹಾಸನದ ಗ್ರಾಮದೇವತೆ, ಶಕ್ತಿದೇವಿ ಹಾಸನಾಂಬೆ ದರ್ಶನಕ್ಕೆ ಕ್ಷಣಗಣನೆ ಅರಂಭಗೊಂಡಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ದೇಗುಲದ ಬಾಗಿಲು ತೆರೆಯೋಕೆ ಸಕಲ ತಯಾರಿ ನಡೆದಿದೆ. ಆದ್ರೆ ಜನಸಾಮಾನ್ಯರಿಗೆ ಮಾತ್ರ ದರ್ಶನ ಭಾಗ್ಯಯಿಲ್ಲದಂತಾಗಿದೆ.
ಹಾಸನಾಂಬೆ.. ಸಂಕಷ್ಟ ಪರಿಹರಿಸೋ ಶಕ್ತಿದೇವತೆ.. ಬೇಡಿದ ವರವನ್ನ ಕೊಡೋ ಕರುಣಾಮಯಿ.. ಸದಾ ತನ್ನ ಭಕ್ತರಿಗೆ ಶಾಂತಿ ಕರುಣಿಸೋ ಶಾಂತರೂಪಿಣಿ.. ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬ ದೇವಿ.
ವಾಡಿಕೆಯಂತೆ ವರ್ಷಕ್ಕೊಮ್ಮೆ ಹಾಸನಾಂಬ ದೇಗುಲದ ಬಾಗಿಲು ತೆರೆಯಲಾಗುತ್ತೆ. ಅಂತೆಯೇ ಅಶ್ವೀಜ ಮಾಸದ ಮೊದಲ ಗುರುವಾರವಾದ ಇಂದು ಹಾಸನಾಂಬೆ ದೇಗುಲದ ಬಾಗಿಲು ತೆರೆಯಲಾಗುತ್ತಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಾಧಸ್ವಾಮಿ, ಜಿಲ್ಲಾಧಿಕಾರಿ ಹಾಗು ಗಣ್ಯರ ಸಮ್ಮುಖದಲ್ಲಿ ದೇವಾಲಯದ ಬಾಗಿಲು ತೆರೆಯಲಾಗುತ್ತೆ.
ಅದಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ.
ಅಂದಹಾಗೆ ಇಂದಿನಿಂದ 12 ದಿನಗಳ ಕಾಲ ಭಕ್ತರಿಗೆ ಹಾಸನಾಂಬೆ ದೇವಿ ದರ್ಶನ ನೀಡಲಿದ್ದಾಳೆ. ವರ್ಷಕ್ಕೊಮ್ಮೆ ದರ್ಶನ ನೀಡೋ ತಾಯಿಯನ್ನ ಕಣ್ತುಂಬಿಕೊಳ್ಳಲು ಕಾಯುತ್ತಿರೋ ಭಕ್ತ ಸಮೂಹ, ಕೊರೊನಾ ಹಿನ್ನೆಲೆಯಲ್ಲಿ ಹಾಸನ ನಗರದ 10 ಕಡೆ ಆನ್ಲೈನ್ ಮೂಲಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಮೊದಲ ದಿನವಾದ ಇಂದು ಆಹ್ವಾನಿತ ಗಣ್ಯರಿಗೆ ಬೆಳಗ್ಗೆ 12 ಗಂಟೆಯಿಂದ ಸಂಜೆ 6 ಗಂಟೆವರೆಗೆ ದರ್ಶನಕ್ಕೆ ಅವಕಾಶ ಇದೆ, ಆದ್ರೆ ಸಾರ್ವಜನಿಕರಿಗೆ ದರ್ಶನ ಇರೋದಿಲ್ಲವೆಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ಇನ್ನು ಭಕ್ತರು ಹಾಸನಾಂಬ ಲೈವ್ 2020 ಎಂಬ ಲಿಂಕ್ ಬಳಸಿ ಆನ್ಲೈನ್ ಮೂಲಕ ಹಾಸನಾಂಬೆ ದರ್ಶನ ಪಡೆಯಬಹುದೆಂದು ತಿಳಿಸಿದ್ದಾರೆ.
ಮೊದಲ ಹಾಗೂ ಕೊನೆಯ ದಿನ ಮಾತ್ರ ಆಹ್ವಾನಿತ ಗಣ್ಯರಿಗೆ ದರ್ಶನ ಸಿಗಲಿದೆ, ಇನ್ನುಳಿದ ದಿನಗಳಲ್ಲಿ ಯಾರಿಗೂ ಎಂಟ್ರಿ ಇರೋದಿಲ್ಲ, ಕೇವಲ ನೇರ ಪ್ರಸಾರದ ಮೂಲಕ ಭಕ್ತರು ದೇವಿಯನ್ನ ಕಣ್ತುಂಬಿಕೊಳ್ಳಬಹುದು.
ವರ್ಷದ ಹಿಂದೆ ಹಚ್ಚಿಟ್ಟ ದೀಪ ಆರುವುದಿಲ್ಲ. ಹೂ ಬಾಡೋದಿಲ್ಲ ಎನ್ನೋ ನಂಬಿಕೆಯೇ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಿ ದರ್ಶನಕ್ಕೆ ಬರುವಂತೆ ಮಾಡುತ್ತಿದೆ. ಆದ್ರೆ ಈ ವರ್ಷ ಕೇವಲ ಗಣ್ಯರಿಗೆ ದರ್ಶನ ಎಂದು ಮಾಡಿರೋ ತೀರ್ಮಾನ ಸಹಜವಾಗಿಯೇ ಭಕ್ತರ ಅಸಮಾಧಾನಕ್ಕೆ ಕಾರಣವಾಗಿದೆ.
ಒಟ್ನಲ್ಲಿ ಕೊರೊನಾ ಆತಂಕದ ನಡುವೆ, ಭಕ್ತರ ವಿರೋಧದ ಮಧ್ಯೆ ಹಾಸನಾಂಬೆ ಉತ್ಸವ ಯಶಸ್ವಿಗೊಳಿಸಲು ಜಿಲ್ಲಾಡಳಿತ ಸಜ್ಜಾಗಿದೆ. ಆದ್ರೆ ಇಂದು ದೇಗುಲದ ಬಾಗಿಲು ತೆರೆದ ಮೇಲೆ ಭಕ್ತರ ಸ್ಪಂದನೆ ಹೇಗಿರುತ್ತೆ ಅನ್ನೋದೆ ಕುತೂಹಲ.