ಶಾಸಕಿಯೊಬ್ಬರ ಸಹೋದರನಿಗೆ ನಕಲಿ ಪ್ರ-ಪತ್ರ ನೀಡಿದ ವ್ಯಕ್ತಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ CEO ಆದೇಶ..!
ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಸಹೋದರ ಚನ್ನರಾಜ ಹಟ್ಟಿಹೊಳಿಗೆ ಮೋದಗಾ ಗ್ರಾಮದ ಸುಳ್ಳು ರಹವಾಸಿ ಪ್ರಮಾಣ ಪತ್ರ ನೀಡಿದ ಗ್ರಾಮ ಪಂಚಾಯತಿ ಸದಸ್ಯ ಬಾಬು ಕಾಳೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಬೆಳಗಾವಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮೋದಗಾ ಗ್ರಾಮ ಪಂಚಾಯತಿಯ ಪಿಡಿಓಗೆ ಆದೇಶ ನೀಡಿದ್ದಾರೆ.
ಚನ್ನರಾಜ ಹಟ್ಟಿಹೊಳಿ ಮೋದಗಾ ಗ್ರಾಮದ ಮನೆ ನಂ. 442 ರಲ್ಲಿ ವಾಸಿಸುತ್ತಿರುವುದಾಗಿ ಗ್ರಾ.ಪಂ. ಸದಸ್ಯ ಬಾಬು ಕಾಳೆ ಅವರಿಂದ ನಕಲಿ ರಹವಾಸಿ ಪ್ರಮಾಣಪತ್ರ ಪಡೆದು ಮೋದಗಾ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಗೆ ಸ್ಪರ್ಧಿಸಿ ಅವಿರೋಧವಾಗಿ ಆಯ್ಕೆ ಆಗಿದ್ದರು.ಆದರೆ ಅವರು ಹಟ್ಟಿಹೊಳಿ ಗ್ರಾಮದ ನಿವಾಸಿಯಾಗಿದ್ದಾರೆ.
ಗ್ರಾ. ಪಂ. ಸದಸ್ಯರಿಗೆ ರಹವಾಸಿ ಪ್ರಮಾಣ ಪತ್ರ ನೀಡುವ ಅಧಿಕಾರ ಇರುವುದಿಲ್ಲ.ರಹವಾಸಿ ಪ್ರಮಾಣ ಪತ್ರವನ್ನು ಕಂದಾಯ ಇಲಾಖೆ ಅಧಿಕಾರಿಗಳು ಮಾತ್ರ ವಿತರಿಸುತ್ತಾರೆ. ಆದರೆ ಬಾಬು ಕಾಳೆ ಅಧಿಕಾರ ದುರುಪಯೋಗ ಪಡಿಸಿಕೊಂಡು ರಹವಾಸಿ ಪ್ರಮಾಣಪತ್ರದ ಮೇಲೆ ಸಹಿ ಮಾಡುವ ಮೂಲಕ ನಕಲಿ ಪ್ರಮಾಣಪತ್ರ ನೀಡಿದ್ದರಿಂದ ಚನ್ನರಾಜ ಹಟ್ಟಿಹೊಳಿ ಅಕ್ರಮವಾಗಿ ಸಹಕಾರ ಕ್ಷೇತ್ರವನ್ನು ಪ್ರವೇಶಿಸಿದ್ದರು.ಈ ಕುರಿತಂತೆ ಭಾರತೀಯ ಕೃಷಿಕ ಸಮಾಜ ವತಿಯಿಂದ ದೂರು ನೀಡಲಾಗಿತ್ತು. ಆದ್ದರಿಂದ ದೂರಿನ ಹಿನ್ನೆಲೆಯಲ್ಲಿ ತಾ. ಪಂ. ಹಾಗೂ ಗ್ರಾ. ಪಂ. ಅಧಿಕಾರಿಗಳಿಂದ ವರದಿ ಪಡೆದಿರುವ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ವಿ.ರಾಜೇಂದ್ರ ಅವರು, ರಹವಾಸಿ ಪ್ರಮಾಣಪತ್ರವು ನಕಲಿ ಎಂಬುದು ಸಾಬೀತಾಗಿರುವ ಹಿನ್ನಲೆಯಲ್ಲಿ ಬಾಬು ಕಾಳೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸೋಮವಾರ ಆದೇಶ ನೀಡಿದ್ದಾರೆ.ನಕಲಿ ಪ್ರಮಾಣಪತ್ರ ವಿತರಣೆ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದ ಪ್ರಾದೇಶಿಕ ಆಯುಕ್ತರು, ಅಕ್ರಮದಲ್ಲಿ ಭಾಗಿಯಾಗಿರುವ ಮೋದಗ ಗ್ರಾ. ಪಂ. ಸದಸ್ಯ ಬಾಬು ಕಾಳೆ, ಚನ್ನರಾಜ ಹಟ್ಟಿಹೊಳಿ ಹಾಗೂ ಮೋದಗಾ ಪ್ರಾಥಮಿಕ ಕೃಷಿ ಪತ್ತಿಕ ಸಹಕಾರ ಸಂಘದ ಕಾರ್ಯದರ್ಶಿ ವಿರುದ್ದ ಕ್ರಮ ಜರುಗಿಸುಂತೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದ್ದರು.ಈ ಕುರಿತಂತೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಭಾರತೀಯ ಕೃಷಿಕ ಸಮಾಜ (ಸಂಯುಕ್ತ)ದ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ, ತಕ್ಷಣ ಮೂರೂ ಜನರ ವಿರುದ್ಧ ಕ್ರಮ ಜರುಗಿಸಬೇಕು. ಬಾಬು ಕಾಳೆ ಮತ್ತು ಚನ್ನರಾಜ ಹಟ್ಟಿಹೋಳಿ ಅವರ ಸದಸ್ಯತ್ವವನ್ನು ರದ್ದು ಪಡಿಸಬೇಕು. ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿಯ ವಿರುದ್ಧವೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.