ಮೂಡಲಗಿ: ಸ್ಥಳೀಯವಾಗಿ ಭೂಮಾಪನ ಹಾಗೂ ಕೃಷಿ ಇಲಾಖೆ ಕಚೇರಿ ಸ್ಥಾಪಿಸಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪಟ್ಟಣದಲ್ಲಿ ತಹಸೀಲ್ದಾರ್ ಶ್ರೀಶೈಲ ಗುಡಮೆಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಸಂಘಟನೆ ಜಿಲ್ಲಾಧ್ಯಕ್ಷ ಕಲ್ಮೇಶ ಗೋಕಾಕ ಮಾತನಾಡಿ, ಮೂಡಲಗಿ ತಾಲೂಕು ಕೇಂದ್ರವಾಗಿ 9 ವರ್ಷ ಕಳೆದರೂ ಪಟ್ಟಣದಲ್ಲಿ ಈವರೆಗೆ ಭೂಮಾಪನ ಹಾಗೂ ಕೃಷಿ ಇಲಾಖೆ ಕಚೇರಿ ಸ್ಥಾಪಿಸಿಲ್ಲ. ಇದರಿಂದ ಸಾರ್ವಜನಿಕರು ಹಾಗೂ ರೈತರು ಪರದಾಡುತ್ತಿದ್ದು, ಕೂಡಲೇ ಎರಡೂ ಕಚೇರಿ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಪಟ್ಟಣದ ಪಶು ಆಸ್ಪತ್ರೆಯಲ್ಲಿ ಸಮರ್ಪಕ ಔಷಧ ಪೂರೈಸುವುದಿಲ್ಲ. ಜತೆಗೆ ಜಾನುವಾರುಗಳಿಗೆ ಸಕಾಲಿಕ ಚಿಕಿತ್ಸೆ ದೊರೆಯದ ಹಿನ್ನೆಲೆಯಲ್ಲಿ ಕೃಷಿಕರು ತೊಂದರೆ ಅನುಭವಿಸುತ್ತಿದ್ದಾರೆ. ಶೀಘ್ರವೇ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಮೂಡಲಗಿಗೆ ಭೂಮಾಪನಾ ಹಾಗೂ ಕೃಷಿ ಇಲಾಖೆ ಕಚೇರಿ ಸ್ಥಾಪನೆ ಜತೆಗೆ ಪಟ್ಟಣದ ಪಶು ಆಸ್ಪತ್ರೆ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಸೌಲಭ್ಯ ದೊರೆಯಲು ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಕೋರಿದ್ದಾರೆ.
ಭೀಮಶಿ ಕೋರಿಶೆಟ್ಟಿ, ಶಿವು ಗೋಕಾಕ, ಅಶೋಕ ಕೊಳವಿ, ಪ್ರವೀಣ ದಡ್ಡಗೋಳ, ಶಿವು ಬ್ಯಾಕೂಡ, ಸಿದ್ದು ಕಂಬಳಿ, ಓಂಕಾರ ಅಗಸರ, ವಿಶಾಲ ರೇಳೆಕರ, ರವಿ ಕಂಕಣವಾಡಿ, ನವೀನ ಪತ್ತಾರ ಹಾಗೂ ರೈತರು ಇದ್ದರು.
Laxmi News 24×7