ಧಾರವಾಡ: ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ವೇದಿಕೆ ಹಾಗೂ ದೀಪಕ ಚಿಂಚೋರೆ ಅಭಿಮಾನಿ ಬಳಗದ ವತಿಯಿಂದ ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ನೇತೃತ್ವದಲ್ಲಿ ನಗರದಲ್ಲಿ ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಒಂದೆಡೆ ಪ್ರತ್ಯೇಕ ಮಹಾನಗರ ಪಾಲಿಕೆಗಾಗಿ 15ರಿಂದ ಸತ್ಯಪ್ರತಿಪಾದನಾ ಸತ್ಯಾಗ್ರಹ ನಡೆಸುತ್ತಿದೆ. ಮತ್ತೊಂದೆಡೆ ಮೇ 22ರಂದು ತಮ್ಮ ಜನ್ಮದಿನ ಆಚರಿಸಿಕೊಳ್ಳದಿರುವ ದೀಪಕ ಚಿಂಚೋರೆ ನಿರ್ಧರಿಸಿದ್ದರು. ಕಾರ್ಯಕರ್ತರು, ಬೆಂಬಲಿಗರು ಪ್ರತ್ಯೇಕ ಪಾಲಿಕೆ ಹೋರಾಟದಲ್ಲಿ ಭಾಗವಹಿಸಲು ಕರೆ ನೀಡಿದ್ದರು. ಅವರ ಕೋರಿಕೆಯಂತೆ ಸಾವಿರಾರು ಜನ ಪಾಲ್ಗೊಂಡು ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಪ್ರತ್ಯೇಕ ಪಾಲಿಕೆ ಆಗುವವರೆಗೆ ಹೋರಾಟ ನಿಲ್ಲದು ಎಂದು ಘೋಷಿಸಿದ ದೀಪಕ ಚಿಂಚೋರೆ, ಕಲಾಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ರ್ಯಾಲಿಯ ನೇತೃತ್ವ ವಹಿಸಿದರು.
ಪ್ರತಿಭಟನಾಕಾರರು ಸಾಹಿತ್ಯ- ಸಂಗೀತ ಕಲೆಗಳ ಬೀಡು ಧಾರವಾಡ, ನಮ್ಮ ಧಾರವಾಡ ಹುಬ್ಬಳ್ಳಿಯ ಹಿತ್ತಲು ಅಲ್ಲ, ಪ್ರಲ್ಹಾದ ಜೋಶಿ& ಅರವಿಂದ ಬೆಲ್ಲದ, ಈರೇಶ ಅಂಚಟಗೇರಿಗೆ ಧಿಕ್ಕಾರ ಎಂಬ ಭಿತ್ತಿಪತ್ರಗಳನ್ನು ಹಿಡಿದು ಮೆರವಣಿಗೆಯಲ್ಲಿ ಸಂಚರಿಸಿದರು.
ವಿವಿಧ ವಾದ್ಯಮೇಳದೊಂದಿಗೆ ಕಡಪಾ ಮೈದಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ, ಜಿಲ್ಲಾಧಿಕಾರಿ ಕಚೇರಿವರೆಗೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ದೀಪಕ ಚಿಂಚೋರೆ ಮಾತನಾಡಿ, ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರು ದ್ವಂದ್ವ ನೀತಿಯ ಶಾಸಕ. ರಾಜ್ಯಪಾಲರ ಬಳಿ ಸರ್ಕಾರದ ಕಡತ ಹೋಗಿ 11 ತಿಂಗಳಾದರೂ ಸಹಿ ಮಾಡಿಲ್ಲ. ಇದಕ್ಕೆ ಕಾರಣ ಶಾಸಕ ಅರವಿಂದ ಬೆಲ್ಲದ. ರಾಜ್ಯ ಸರ್ಕಾರ ತನ್ನ ಕೆಲಸ ಮಾಡಿದೆ. ಮೇ 30ರೊಳಗಾಗಿ ರಾಜ್ಯಪಾಲರು ಸರ್ಕಾರದ ಶಿಾರಸಿಗೆ ಅಂಕಿತ ಹಾಕದಿದ್ದರೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಅರವಿಂದ ಬೆಲ್ಲದ ಅವರ ಹುಬ್ಬಳ್ಳಿಯ ಮನೆಗಳಿಗೆ ಪಾದಯಾತ್ರೆ ನಡೆಸಿ ಬಿಸಿ ಮುಟ್ಟಿಸಲಾಗುವುದು ಎಂದರು.
Laxmi News 24×7