ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಗೋಳಿಕಟ್ಟಾ ಗ್ರಾಮದಲ್ಲಿ ಅರಣ್ಯ ಇಲಾಖೆಯಿಂದ ಅರಣ್ಯ ಒತ್ತುವರಿ ತೆರವಿಗೆ ಭರ್ಜರಿ ಕಾರ್ಯಾಚರಣೆ ನಡೆಸಿದೆ. ಅರಣ್ಯ ಇಲಾಖೆಗೆ ಸೇರಿದ 389.07 ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಂಡಿದೆ.
ಈ ಹಿಂದೆ ಗೋಳಿಕಟ್ಟಾದಲ್ಲಿ ಕಾಮಧೇನು ಹಾಲು ಹಾಗೂ ಹಣ್ಣು ಸಂಸ್ಕರಣಾ ಸಹಕಾರಿ ಸಂಘಕ್ಕೆ ಅರಣ್ಯ ಇಲಾಖೆ ತನ್ನ ಜಾಗವನ್ನು ಲೀಸ್ ನೀಡಿತ್ತು. ಲೀಸ್ ಮುಕ್ತಾಯವಾದರೂ ಜಾಗವನ್ನು ಬಿಟ್ಟುಕೊಟ್ಟಿರಲಿಲ್ಲ. ಈ ಸಂಬಂಧ ಧಾರವಾಡದ ಹೈಕೋರ್ಟ್ ಪೀಠದಲ್ಲಿ ದಾವೆ ಇದ್ದು, ಇದೀಗ ಅರಣ್ಯ ಇಲಾಖೆ ಪರ ತೀರ್ಪು ಬಂದಿದೆ. ಜೊತೆಗೆ, ಈ ಜಾಗದಲ್ಲಿ ಹಲವರು ಒತ್ತುವರಿ ಮಾಡಿಕೊಂಡು ವಾಸವಿದ್ದರು. ಈ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಜೆಸಿಬಿ, ಟ್ರ್ಯಾಕ್ಟರ್ ಮೂಲಕ ಒತ್ತುವರಿ ತೆರವುಗೊಳಿಸಿದರು.
ಈ ವೇಳೆ, ಸ್ಥಳೀಯ ಮಹಿಳೆಯರು, ವೃದ್ಧರು ತೀವ್ರ ವಿರೋಧ ವ್ಯಕ್ತಪಡಿಸಿದರು. ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ತರಾದರು. ಇದರಿಂದ ಕೆರಳಿದ ಒತ್ತುವರಿದಾರರು ರಸ್ತೆ ತಡೆ ನಡೆಸಿದರು. ಗೋಳಿಕಟ್ಟಾ ಸುತ್ತಮುತ್ತ ಉದ್ವಿಗ್ನ ವಾತಾವರಣ ಉಂಟಾಗಿದ್ದು, ಪರಿಸ್ಥಿತಿಯನ್ನು ತಿಳಿಗೊಳಿಸಲು ಪೊಲೀಸರು ಹರಸಾಹಸ ಪಟ್ಟರು.
Laxmi News 24×7