ದೇವನಹಳ್ಳಿ: ಸಿಲಿಕಾನ್ ಸಿಟಿ ಸುತ್ತಮುತ್ತ ನಿಮ್ಮದು ಜಮೀನು ಇಲ್ಲವೇ ಸೈಟ್ ಇದೆಯಾ? ಅದು ನಿಮ್ಮ ಬಳಿಯೇ ಇದೆ ಅಂತ ನೀವು ನೆಮ್ಮದಿಯಾಗಿದ್ದೀರಾ? ಹಾಗಾದ್ರೆ ನಿಮ್ಮ ನೆಮ್ಮದಿಗೆ ದಿಢೀರ್ ಭಂಗ ಬಂದರೂ ಬರಬಹುದು. ಅದಕ್ಕೂ ಮುನ್ನ ನೀವು ಬೆಚ್ಚಿಬೀಳುವ ಸಂಗತಿಯೊಂದು ಇಲ್ಲಿದೆ ನೋಡಿ.
ಬಸವರಾಜ್, ಪ್ರಸನ್ನಕುಮಾರ್ ಮತ್ತು ಉಮೇಶ್. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ತಾಲೂಕು ಕಛೇರಿಯಲ್ಲಿ ಕಂಪ್ಯೂಟರ್ ಆಪರೇಟರ್ಸ್. ಇವರು ಸುಲಭವಾಗಿ ಹಣ ಮಾಡಿ ಕೋಟಿ ಕೋಟಿ ಸಂಪಾದನೆ ಮಾಡೋದಕ್ಕೆ ಅಂತಾ ಸೈಟ್ ಮತ್ತು ಜಮೀನಿನ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುವುದನ್ನೇ ಕರಗತ ಮಾಡಿಕೊಂಡಿದ್ರು.
ಉಪನೊಂದಣಾಧಿಕಾರಿ ಕಛೇರಿಯನ್ನೇ ಕೇಂದ್ರವಾಗಿಸಿಕೊಂಡಿದ್ರು..
ಅದಕ್ಕಾಗಿ ದೊಡ್ಡಬಳ್ಳಾಪುರ ಉಪನೊಂದಣಾಧಿಕಾರಿ ಕಛೇರಿಯನ್ನೇ ಕೇಂದ್ರವಾಗಿಸಿಕೊಂಡಿದ್ರು. ಕಳೆದ ತಿಂಗಳು ದೊಡ್ಡಬಳ್ಳಾಪುರ ಬಳಿಯ ಜಮೀನೊಂದಕ್ಕೆ ನಕಲಿ ದಾಖಲೆ ಸೃಷ್ಟಿಸಿ ಕೋಟಿ ಕೋಟಿಗೆ ಮಾರಾಟ ಮಾಡಿದ್ರು. ಹೀಗಾಗಿ ವಿಚಾರ ತಿಳಿದು ಶಾಖ್ ಆದ ಮಾಲೀಕ ಅಂದು ಸಬ್ ರಿಜಿಸ್ಟರ್ ಕಛೇರಿ ಮತ್ತು ದೊಡ್ಡಬಳ್ಳಾಪುರ ಠಾಣೆಯಲ್ಲಿ ನಕಲಿ ದಾಖಲೆ ಸೃಷ್ಟಿ ಬಗ್ಗೆ ದೂರು ನೀಡಿದ್ರು. ದೂರನ್ನ ಗಂಭೀರವಾಗಿ ಪರಿಗಣಿಸಿದ ಪೊಲೀಸ್ರು ತನಿಖೆ ನಡೆಸಿದಾಗ ಸತ್ಯ ಬಯಲಾಗಿದೆ.
ಇದೇ ರೀತಿ ಮೂವರು ದೊಡ್ಡಬಳ್ಳಾಪುರ, ದೇವನಹಳ್ಳಿ, ಚಿಕ್ಕಜಾಲ, ಯಲಹಂಕ, ಕೆಂಗೇರಿ ಸೇರಿ ಬೆಂಗಳೂರು ಸುತ್ತಮುತ್ತಲಿನ 138 ಎಕರೆಗೂ ಹೆಚ್ಚು ಜಮೀನಿಗೆ ನಕಲಿ ದಾಖಲೆಗಳನ್ನ ಸೃಷ್ಟಿಸಿದ್ರಂತೆ. ಸಬ್ ರಿಜಿಸ್ಟರ್ ಕಛೇರಿಗಳ ಮೂಲ ದಾಖಲೆ ತೆಗೆದು ನಕಲಿ ದಾಖಲೆ ಸೇರಿಸಿ ಖಾತೆ ಮಾಡಿಸಿಕೊಂಡು ಬೇರೆಯವ್ರಿಗೆ ಮಾರಾಟ ಮಾಡೋದಕ್ಕೆ ಮುಂದಾಗಿದ್ರಂತೆ.
138 ಎಕರೆಗೂ ಹೆಚ್ಚು ಜಮೀನಿಗೆ ನಕಲಿ ದಾಖಲೆಗಳನ್ನ ಸೃಷ್ಟಿಸಿದ್ರಂತೆ.
ಆದ್ರೆ ಪೊಲೀಸರ ಕಾರ್ಯಾಚರಣೆಯಿಂದ ಪ್ಲ್ಯಾನ್ ಉಲ್ಟಾ ಆಗಿದ್ದು, ಸಾವಿರಾರು ಕೋಟಿ ಬೆಲೆಯ 138 ಎಕರೆ ಜಮೀನನ್ನ ಉಳಿಸಿದ್ದಾರೆ. ನಕಲಿ ದಾಖಲೆ ಸೃಷ್ಟಿಸಲು ಉಪಯೋಗಿಸಿದ್ದ ಉಪಕರಣಗಳು, ಅಧಿಕಾರಿಗಳ ಸೀಲ್ಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದು, ಖದೀಮರನ್ನ ಮುದ್ದೇ ಮುರಿಯಲು ಕಳಿಸಿದ್ದಾರೆ.
ಒಟ್ನಲ್ಲಿ ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡು ಇರೋ ಬದಲು, ದುರಾಸೆಗೆ ಬಿದ್ದು ಖತರ್ನಾಕ್ ಕೃತ್ಯ ಎಸಗಲು ಹೋದವರು ಲಾಕ್ ಆಗಿದ್ದಾರೆ. ಪ್ರಕರಣವನ್ನು ಮತ್ತಷ್ಟು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಈ ಖತರ್ನಾಖ್ಗಳ ಹಿಂದೆ ಇನ್ನೂ ಯಾರು ಇದ್ದಾರೆ ಅನ್ನೋದನ್ನ ತನಿಖೆ ನಡೆಸುತ್ತಿದ್ದಾರೆ.