ಕೋಲಾರ: ಜಿಲ್ಲೆಯ ಮಾಲೂರಲ್ಲಿ 55 ಸಾವಿರ ಕುಟುಂಬಗಳಿಗೆ ದಿನಸಿ, ತರಕಾರಿ ವಿತರಣೆ ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು. ಅಲ್ಲದೆ ರೈತರ ತೋಟಗಳಿಗೆ ತೆರಳಿ ಮಾಹಿತಿ ಸಂಗ್ರಹಿಸಿ, ಧೈರ್ಯ ತುಂಬಿದರು.
ಸಂಕಷ್ಟದಲ್ಲಿರುವ ರೈತರ ತೋಟಗಳಿಗೆ ಭೇಟಿ ನೀಡಿ ರೈತರ ಸಂಕಷ್ಟ ಕೇಳುವುದರ ಜೊತೆಗೆ ಅವರು ಬೆಳೆದಿರುವ ತರಕಾರಿ ಖರೀದಿ ಮಾಡಿ ಜನರಿಗೆ ಹಂಚಲು ಕಾಂಗ್ರೆಸ್ ಮುಂದಾಗಿದೆ. ಎಲೆಕೋಸು, ಕ್ಯಾರೆಟ್, ಟೊಮ್ಯಾಟೋ, ಕ್ಯಾಪ್ಸಿಕಂ ತೋಟಗಳಿಗೆ ಡಿಕೆಶಿ ಭೇಟಿ ನೀಡಿದರು. ಅಲ್ಲದೆ ಜನರಿಗೆ ವಿತರಿಸಲು ಸಿದ್ಧವಾಗಿರುವ ಗೋಧಿ ಹಿಟ್ಟು ಹಾಗೂ ತರಕಾರಿಗಳನ್ನು ಪರಿಶೀಲಿಸಿದು.

ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಮೊದಲ ಬಾರಿಗೆ ಕೋಲಾರಕ್ಕೆ ಭೇಟಿ ನೀಡಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ಮಾಲೂರು ಶಾಸಕ ನಂಜೇಗೌಡರ ನಿವಾಸದಲ್ಲಿ ಆರತಿ ಎತ್ತಿ ಸ್ವಾಗತ ಮಾಡಲಾಯಿತು. ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಶಾಸಕ ನಂಜೇಗೌಡ ತಮ್ಮ ಕ್ಷೇತ್ರದ ಸುಮಾರು 55 ಸಾವಿರ ಕುಟುಂಬಗಳಿಗೆ ಗೋಧಿ ಹಿಟ್ಟು, ಅಡುಗೆ ಎಣ್ಣೆ ಹಾಗೂ ತರಕಾರಿಗಳನ್ನು ವಿತರಣೆ ಮಾಡುತ್ತಿದ್ದು, ವಿತರಣೆ ಕಾರ್ಯಕ್ಕೆ ಡಿಕೆಶಿ ಚಾಲನೆ ನೀಡಿದರು. ಈ ವೇಳೆ ಮಾಜಿ ಸಚಿವ ಕೃಷ್ಣಬೈರೇಗೌಡ ಹಾಗೂ ಮಾಜಿ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ ಸಾಥ್ ನೀಡಿದರು.

ಈ ವೇಳೆ ಮಾತನಾಡಿದ ಡಿಕೆಶಿ, ಸರ್ಕಾರ ಕೊರೊನಾ ಸಂಕಷ್ಟದ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಏನೆಲ್ಲಾ ನಡೆಯುತ್ತಿದೆ ಎಂಬುದರ ಕುರಿತು ದಾಖಲೆ ಕಲೆ ಹಾಕುತ್ತಿದ್ದೇವೆ. ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇವೆ. ಬಿಜೆಪಿ ಸರ್ಕಾರದಲ್ಲಿ ಎಲ್ಲವೂ ಪೇಪರ್ ನಲ್ಲಿ ಹೇಳಿದಂತೆ ಕೆಲಸ ನಡೆಯುತ್ತಿಲ್ಲ. ಅಲ್ಲದೆ ಕೋಮು ಸೌಹರ್ದ ಹದಗೆಡುತ್ತಿದೆ ಇದನ್ನು ಯಡಿಯೂರಪ್ಪನವರು ಬರೀ ಮಾತಿನಲ್ಲಿ ಹೇಳಿದ್ದಾರೆ ಇದು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಆರೋಪಿಸಿದರು.
ಸರ್ಕಾರ ಕೊರೊನಾ ಸಂಕಷ್ಟದ ಸ್ಥಿತಿಯಲ್ಲಿ ಮೊದಲು ರೈತರ ತರಕಾರಿಗಳನ್ನು ಮಾರಾಟ ಮಾಡಲು ಅನುಕೂಲ ಮಾಡಿಕೊಡಬೇಕು. ಸಿಎಂ ಯಡಿಯೂರಪ್ಪ ವಿಧಾನಸಭೆಯಲ್ಲಿ ರೈತರ ಪರವಾಗಿದ್ದೇವೆ ಎಂದು ಹೇಳಿದಂತೆ ನಡೆದುಕೊಳ್ಳಬೇಕು. ಬೂತ್ ಮಟ್ಟದ ಕಾಂಗ್ರೇಸ್ ಮುಖಂಡರು ಸರ್ಕಾರ ನೀಡುತ್ತಿರುವ ಎಲ್ಲ ಸೌಲಭ್ಯಗಳು ಜನರಿಗೆ ಸಿಗುತ್ತಿದೆಯಾ ಎನ್ನುವುದನ್ನು ಗಮನಿಸಲು ಸೂಚಿಸಿದ್ದೇನೆ ಎಂದರು.

ಇದೇ ವೇಳೆ ಮಾಲೂರು ತಾಲೂಕಿನ ಬಾಳಿಗಾನಹಳ್ಳಿ, ರಾಜೇನಹಳ್ಳಿ, ಓಬೇನಹಳ್ಳಿ, ಸೇರಿದಂತೆ ವಿವಿಧ ರೈತರ ತೋಟಗಳಿಗೆ ಭೇಟಿ ನೀಡಿ ರೈತರ ಜೊತೆ ಮಾತನಾಡಿದರು. ಎಲೆ ಕೋಸು, ಕ್ಯಾರೆಟ್, ಟೊಮ್ಯಾಟೋ, ಕ್ಯಾಪ್ಸಿಕಂ ತೋಟಗಳಲ್ಲಿ ಡಿ.ಕೆ.ಶಿವಕುಮಾರ್ ಒಂದು ಸುತ್ತು ಹಾಕಿದರು.
Laxmi News 24×7