ನವದೆಹಲಿ,ಜೂ.9- ದೇಶದೆಲ್ಲೆಡೆ ಕೊರೊನಾ ವೈರಸ್ ಸೋಂಕು ಮತ್ತು ಸಾವು ಪ್ರಕರಣಗಳು ವ್ಯಾಪಕವಾಗಿ ಹೆಚ್ಚಾಗುತ್ತಿರುವ ಆತಂಕ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಇಂದು ಮಹತ್ವದ ಸಭೆ ನಡೆಸಿ ಹೆಮ್ಮಾರಿಯ ಪರಿಣಾಮಕಾರಿ ನಿಗ್ರಹಕ್ಕಾಗಿ ಅಗತ್ಯವಾಗಿ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು ಚರ್ಚಿಸಿತು.
ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವಧನ್ ನೇತೃತ್ವದಲ್ಲಿ ಸಚಿವರ ಸಮೂಹದ ಸಭೆ ಜರುಗಿತು. ಈ ಸಭೆಯಲ್ಲಿ ಕೊರೊನಾ ಉಲ್ಭಣದ ಬಗ್ಗೆ ಆತಂಕ ವ್ಯಕ್ತಪಡಿಸಿ ಈ ಮಹಾಮಾರಿಯನ್ನು ನಿಯಂತ್ರಿಸುವ ಮಾರ್ಗೋಪಾಯಗಳ ಬಗ್ಗೆ ಗಹನ ಚರ್ಚೆ ನಡೆಯಿತು.
ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿರುವ ಇತರ ದೇಶಗಳು ಅನುಸರಿಸಿದ ವಿಧಾನಗಳನ್ನು ಸಹ ಅಳವಡಿಸಿಕೊಳ್ಳುವ ಬಗ್ಗೆಯೂ ಸಭೆಯಲ್ಲಿ ಸಲಹೆ ಮತ್ತು ಅಭಿಪ್ರಾಯಗಳು ವ್ಯಕ್ತವಾಯಿತು.
ದೇಶದ 10 ರಾಜ್ಯಗಳು ಕೋವಿಡ್ ಸೋಂಕಿನಿಂದ ತೀವ್ರ ಬಾಧೆಗೊಳಗಾಗಿದ್ದು, ಮಹಾರಾಷ್ಟ್ರ ಮತ್ತು ಇತರೆಡೆ ಆದ್ಯತೆ ಮೇರೆಗೆ ಸೋಂಕು ಮತ್ತು ಸಾವು ಪ್ರಕರಣಗಳನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕುರಿತು ಸಚಿವರು ಸೂಚನೆ ನೀಡಿದರು.
ಇದೇ ವೇಳೆ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಲಸಿಕೆ ಮತ್ತು ಔಷಧಿಗಳನ್ನು ಅತ್ಯಂತ ತ್ವರಿತವಾಗಿ ಸಂಶೋಧಿಸಿ ನಿಖರ ಫಲಿತಾಂಶ ನೀಡಲು ಆರೋಗ್ಯ ಸಚಿವಾಲಯಕ್ಕೆ ಡಾ.ಹರ್ಷವರ್ಧನ್ ಸ್ಪಷ್ಟ ಸೂಚನೆ ನೀಡಿದರು.